ತತ್ವಜ್ಞಾನ ಲೋಕದಲ್ಲಿ ಮಾತ್ರವಲ್ಲ, ಬದುಕಿನ ಪ್ರತಿಯೊಂದು ಸಂದರ್ಭದಲ್ಲೂ ಎದುರಾಗುವ ಜಿಜ್ಞಾಸೆ, ಸಮಸ್ಯೆ, ಸವಾಲು ಮತ್ತು ಸಂಶಯಗಳಿಗೆ ಶ್ರೀ ಆಚಾರ್ಯ ಮಧ್ವರು ರಚಿಸಿದ ಮಹಾಭಾರತ ತಾತ್ಪರ್ಯ ನಿರ್ಣಯ ಗ್ರಂಥವು ಪರಿಹಾರ ಸೂಚಿಸುತ್ತದೆ ಎಂದು ಭಂಡಾರಕೇರಿ ಮಠಾಧೀಶರಾದ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಹೇಳಿದರು.
ಶ್ರೀವಿದ್ಯಾಮಾನ್ಯತೀರ್ಥರ ಪೀಠಾರೋಹಣ ಶತಮಾನೋತ್ಸವದ ಸಂಭ್ರಮಾಚರಣೆಯ ಅಂಗವಾಗಿ ನಡೆಯುತ್ತಿರುವ ವಿದ್ವಾಂಸರ ಐದನೇ ಹಂತದ ಸನ್ಮಾನ, ಬಿರುದು ಪ್ರದಾನ ಸಮಾರಂಭದಲ್ಲಿ 18 ವಿದ್ವಾಂಸರಿಗೆ ಸ್ಮರಣಿಕೆ, ಸಂಭಾವನೆಗಳನ್ನು ನೀಡುವ ಮೂಲಕ ಗೌರವ ಸಮರ್ಪಿಸಿ ಅನುಗ್ರಹ ಸಂದೇಶ ನೀಡಿದರು. ಮಹಾಭಾರತವನ್ನು ಐದನೆಯ ವೇದವೆಂದು ಪ್ರಾಚೀನರು ಕರೆದಿದ್ದಾರೆ. ಅದಕ್ಕೆ ಆಚಾರ್ಯ ಮಧ್ವರು ಸಮರ್ಥವಾಗಿ ತಾತ್ಪರ್ಯ ನಿರ್ಣಯ ರಚನೆ ಮಾಡಿ ವಿದ್ವತ್ ಲೋಕಕ್ಕೆ ಮಹೋನ್ನತ ಕೊಡುಗೆ ನೀಡಿದ್ದಾರೆ. ಈ ಗ್ರಂಥದ ಪಾರಾಯಣವನ್ನು 18 ವಿದ್ವಾಂಸರು ಈ ಮಠದಲ್ಲಿ ಮಾಡಿರುವುದು ಧಾರ್ಮಿಕ ಸಂಚಲನ ಮೂಡಿಸಿದೆ. ಇಂಥ ಚಟುವಟಿಕೆ ಸಮಾಜದಲ್ಲಿ ಸೌಹಾರ್ದ ಮೂಡಿಸಿ ದೇಶದ ಅಖಂಡತೆಗೆ ಬೆಂಬಲಿಸುತ್ತದೆ ಎಂದರು.
ಮಾತೆಗೆ ಶಿಕ್ಷಣ ನೀಡಿದ ತಾಣ:
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆನುವಂಶಿಕ ಮೊಕ್ತೇಸರ ವಿದ್ವಾನ್ಹರಿನಾರಾಯಣ ಅಸ್ರಣ್ಣ ಮಾತನಾಡಿ, ಭಂಡಾರಕೇರಿ ಮಠವು ನನ್ನ ತಾಯಿಗೆ ಅಂದಿನ ಕಾಲದಲ್ಲೇ ಶಿಕ್ಷಣ ನೀಡಿದ ತಾಣ ಎಂದು ಧನ್ಯತೆಯಿಂದ ಎಂದು ಸ್ಮರಿಸಿದರು. ಕಟೀಲು ದೇವಸ್ಥಾನದಲ್ಲಿ ದೇವಿಯ ಆರಾಧನೆಯ ಕುರಿತು ಬಂದ ಅನೇಕ ಸಂಶಯಗಳಿಗೆ ಶ್ರೀ ವಿದ್ಯಾಮಾನ್ಯತೀರ್ಥರು ಸಮರ್ಪಕವಾದ ಉತ್ತರವನ್ನು ನೀಡುತ್ತಿದ್ದರು. ದೇವಳದಲ್ಲಿ ನಡೆಯುತ್ತಿರುವ ಅನೇಕ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದರು. ಇದನ್ನು ಇತಿಹಾಸ ಮರೆಯದು ಎಂದರು. ನಾಡಿನ ಹಿರಿಯ ವಿದ್ವಾಂಸ ಡಾ. ವ್ಯಾಸನಕೆರೆ ಪ್ರಭಂಜನಾಚಾರ್ಯ ಅಧ್ಯಕ್ಷತೆ ವಹಿಸಿದ್ದರು.
ಪಾರಾಯಣ:
ದೇಶದ ವಿವಿಧ ಭಾಗದ 18 ವಿದ್ವಾಂಸರು ಮಹಾಭಾರತ ತಾತ್ಪರ್ಯ ನಿರ್ಣಯ ಗ್ರಂಥವನ್ನು 8 ದಿನಗಳ ಕಾಲ 3 ಬಾರಿ ಪಾರಾಯಣ ಮಾಡಿದ್ದು ವಿಶೇಷವಾಗಿ ಗಮನ ಸೆಳೆಯಿತು.
ಪ್ರಶಸ್ತಿ ಪ್ರದಾನ:
ಕಾರ್ಯಕ್ರಮದಲ್ಲಿ, ಮೈಸೂರಿನ ವಿದ್ವಾಂಸರಾದ ಬಾದರಾಯಣಾಚಾರ್ಯರಿಗೆ ‘ಜಯಶ್ರೀ ಕಂಬುಕಂಠ’ ಎಂಬ ಪ್ರಶಸ್ತಿಯನ್ನು ನೀಡಿ ವಿಶೇಷವಾಗಿ ಸನ್ಮಾನಿಸಲಾಯಿತು. ಸನ್ಮಾನಕ್ಕೆ ಉತ್ತರಿಸಿದ ಅವರು, ಭಂಡಾರಿಕೇರಿ ಮಠಾಧೀಶರ 47ನೆಯ ಚಾತುರ್ಮಾಸ್ಯ ಎಲ್ಲ ರೀತಿಯಿಂದಲೂ ಅಸಾಧಾರಣವಾಗಿದೆ. ವಿದ್ಯಾಮಾನ್ಯತೀರ್ಥರು ಸಮಾಜಕ್ಕೆ ಆದರ್ಶ ಯತಿಗಳಾಗಿ ಬಾಳಿ ವಿದ್ವತ್ಸಮಾಜಕ್ಕೆ ಬೆಳಕಾದವರು. ಅಂತಹ ಶ್ರೇಷ್ಠ ಯತಿಗಳ ಸತ್ಯತೀರ್ಥ ಪೀಠಾರೋಹಣದ ಶತಮಾನೋತ್ಸವವನ್ನು ವೈಭವದಿಂದ ಆಚರಿಸುವ ಮೂಲಕ ವಿದ್ಯೇಶತೀರ್ಥರು ವಿದ್ವತ್ ಸಮಾಜಕ್ಕೆ ಮಹೋನ್ನತ ಸೇವೆ ಸಮರ್ಪಣೆ ಮಾಡುತ್ತಿದ್ದಾರೆ ಎಂದರು.
ಸನ್ಮಾನಿತರು:
ಸಮಾರಂಭದಲ್ಲಿ ದೇಶದ ವಿವಿಧ ಭಾಗದ ವಿದ್ವಾಂಸರಾದ ಪುರಂದರಾಚಾರ್ಯ ಹಯಗ್ರೀವ(ಬೆಂಗಳೂರು), ಶ್ರೀಕಾಂತಾಚಾರ್ಯ ಪುರೋಹಿತ (ಆದಿಚುಂಚನ ಗಿರಿ), ಗುರುಪ್ರಸಾದಾಚಾರ್ಯ ಹನಸೋಗೆ ಬೆಂಗಳೂರು, ರಘತ್ತಮಾ ಚಾರ್ಯ ನಾಗಸಂಪಿಗೆ, ಬಾಗಲಕೋಟೆ, ವಾಗೀಶಾ ಚಾರ್ಯ ಮಂತ್ರಾಲಯ, ಪವನಾ ಚಾರ್ಯ ಕುರುಡಿ ರಾಯಚೂರು, ವೇಣು ಗೋಪಾಲಾಚಾರ್ಯ ಪುರೋ ಹಿತ (ಮಂತ್ರಾಲಯ), ಹೃಷಿಕೇಶಾಚಾರ್ಯ ಮಠದ ಬೆಂಗಳೂರು, ಸಿ. ಜೆ. ವಿಕ್ರಮಸಿಂಹಾ ಚಾರ್ಯ ಬೆಂಗಳೂರು, ಶ್ರೀಹರಿ ಆಚಾರ್ಯ ಪೂಜಾರ ಬೆಂಗಳೂರು, ನರಸಿಂಹಾಚಾರ್ಯ ಕೊರ್ಲ ಹಳ್ಳಿ ಹುಬ್ಬಳ್ಳಿ, ಪ್ರತೋಷಾಚಾರ್ಯ ಬೆಂಗಳೂರು, ಆದಿ ಶೇಷಾ ಚಾರ್ಯ ಬಾಗಲಕೋಟೆ, ಉಡುಪಿ ಕೃಷ್ಣಾ ಚಾರ್ಯ ಬಾಗಲ ಕೋಟೆ, ಅಜಯಾ ಚಾರ್ಯ ಜೋಷಿವಿಜಯಪುರ, ವೇದೇಶಾಚಾರ್ಯ ನಾಗಸಂಪಿಗೆ ಬೆಂಗಳೂರು, ಐತರೇಯಾಚಾರ್ಯ ಭಾರದ್ವಾಜ ಬೆಂಗಳೂರು.
==
ವೈವಿಧ್ಯಗಳ ಸಂಗಮ- ಚಾತುರ್ಮಾಸ್ಯ
ಮಧ್ವಾಚಾರ್ಯರೇ ಮೈವೆತ್ತಂತಿರುವ ಸರ್ವಮೂಲ ಗ್ರಂಥಗಳ ಆಮೂಲಾಗ್ರ ಪಾರಾಯಣ, ಇವುಗಳ ಜೊತೆಗೆ ಕನ್ನಡದಲ್ಲಿ ಸ್ವಯಂ ಶ್ರೀ ವಿದ್ಯೇಶ ತೀರ್ಥರು ಅನುಭಾವಿಸಿ ರಚಿಸಿದ ಕೀರ್ತನೆಗಳ ಗಾಯನ,, ಭೂಸುರರ ಸಮ್ಮಾನ, ಸಂಗೀತ, ಯಕ್ಷಗಾನ, ತಾಳಮದ್ದಲೆ ಸಹಿತ ಸ್ಥಳೀಯ ಕಲಾ ಮಾಧ್ಯಮಗಳ ಪ್ರಸ್ತುತಿ, ದಿನ ನಿತ್ಯದ ಸಂಸ್ಥಾನ ಪೂಜೆ, 4 ವೇದ, - ಹೀಗೆ ಅನೇಕ ಪ್ರಕಾರ ಗಳಲ್ಲಿ ಪರಮಾತ್ಮನನ್ನು ಉಪಾಸನೆ ಮಾಡುತ್ತಿದ್ದಾರೆ. ಯತಿಗಳ ಚಾತುರ್ಮಾಸದ ಇತಿಹಾಸದಲ್ಲೇ ಇದು ವಿಭಿನ್ನ ದಾಖಲೆಯಾಗಿ ನಿರೂಪಣೆಗೊಂಡಿದೆ.
=====
ಭಂಡಾರಿಕೇರಿ ಮಠಾಧೀಶರ 47ನೇ ಚಾತುರ್ಮಾಸ್ಯ ಎಲ್ಲ ರೀತಿಯಿಂದಲೂ ಅಸಾಧಾರಣವಾಗಿದೆ. ಶ್ರೀಗಳು ಬಿಡುವಿಲ್ಲದ ಸಮಯದಲ್ಲೂ ಇಲ್ಲಿ ನಡೆಯುವ ಚರ್ಚೆ, ಗೋಷ್ಠಿ, ಪಾರಾಯಣ, ಉಪನ್ಯಾಸ, ದು ,ಭಜನೆ ನೃತ್ಯ ಎಲ್ಲವನ್ನು ಕೂಲಂಕಶವಾಗಿ ಗಮನಿಸುತ್ತಿದ್ದಾರೆ. ವಿದ್ವಾಂಸರಿಗೆ ಕಲಾವಿದರಿಗೆ ಸೂಕ್ತ ಗೌರವಾದರ ಪ್ರದಾನ ಮಾಡುವಲ್ಲಿ ಅವರಿಗೆ ಅನನ್ಯ ಪ್ರೀತಿ ಇದೆ. ಈ ಮೂಲಕ ಅವರು ಧರ್ಮ, ಕಲಾ ಜಾಗೃತಿಯನ್ನು ಮೂಡಿಸುವಲ್ಲಿ ಅಗ್ರಮಾನ್ಯರಾಗಿದ್ದಾರೆ. ಚತುರ್ವೇದ ಪಾರಾಯಣಕ್ಕಾಗಿ ಬಂದ ವಿದ್ವಾಂಸರ ಪ್ರೋತ್ಸಾಹಕ್ಕಾಗಿ ಶ್ರೀಗಳೇ ಅವರ ಮುಂದೆ ಕನಿಷ್ಠ 15 ನಿಮಿಷಗಳ ಕಾಲ ಕಣ್ಣು ಮುಚ್ಚಿ ಕುಳಿತು ವೇದಶ್ರವಣ ಮಾಡುವ ಪರಿ ಅನನ್ಯವಾಗಿದೆ. ಇಂಥ ಸಂದರ್ಭದಲ್ಲಿ ನಾನೂ ಭಾಗವಹಿಸಿ ತಾತ್ಪರ್ಯ ನಿರ್ಣಯ ಗ್ರಂ್ಥ ಪಾರಾಯಣ ಮಾಡುವ ಸದವಕಾಶ ನನಗೂ ದೊರೆತದ್ದು ಸುಕೃತ.
ವಿದ್ವಾನ್ ಕಿರಣಾಚಾರ್ಯ
ಪಾರಾಯಣ ಯಜ್ಞದಲ್ಲಿ ಭಾಗವಹಿಸಿದ್ದ ಪಂಡಿತ
