ಸಿದ್ದಾಪುರ: ಇಲ್ಲಿನ ಹಿರಿಯ ನಾಗರಿಕರ ವೇದಿಕೆಯ ವಾರ್ಷಿಕ ಮಹಾಸಭೆ ಸ್ವಂತ ಕಟ್ಟಡವಾದ ಅನುಭವ ಮಂಟಪದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಆಗಮಿಸಿದ್ದ ಶಂಕರನಾರಾಯಣ ಆರಕ್ಷಕ ಠಾಣೆಯ ಉಪನಿರೀಕ್ಷಕ ಯೂನಸ್ ಗುಡ್ಡೇಕರ್ ಮಾತನಾಡಿ ಸರಕಾರದ ಆಸರೆ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಇತ್ತೀಚೆಗೆ ಸೈಬರ್ ಅಪರಾಧಗಳ ಕುರಿತು ಮಾಹಿತಿ ನೀಡಿ ಹಿರಿಯ ನಾಗರಿಕರು ವಿಶೇಷವಾಗಿ ಎಚ್ಚರದಿಂದಿರಬೇಕೆಂದರು. ಅಂತಹ ಅನುಮಾನಗಳು ಕಂಡು ಬಂದಲ್ಲಿ ತಕ್ಷಣ ಮಾಹಿತಿ ನೀಡುವಂತೆ ಕೇಳಿಕೊಂಡರು. ಸಮಾರಂಭದಲ್ಲಿ ಹಿರಿಯ ಸಾಧಕರಾದ ಶ್ರೀನಿವಾಸ ಪೈ, ಸಂಪಿಗೇಡಿ ನಾರಾಯಣಶೆಟ್ಟಿ, ಮತ್ತು ಡಾ. ಚಂದ್ರಮೌಳಿ ಅವರನ್ನು ಗೌರವಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ವೇದಿಕೆ ಅಧ್ಯಕ್ಷ ಹೆಚ್. ಭೋಜ ಶೆಟ್ಟಿ ವಹಿಸಿದ್ದರು. ವಾರ್ಷಿಕ ವರದಿಯನ್ನು ಕಾರ್ಯದರ್ಶಿಗಳಾದ ಶ್ರೀ ದಿನಕರ ತೋಳಾರ್ ವಾಚಿಸಿದರು. ಶ್ರೀ ರಾಮದಾಸ್ ಪ್ರಭು ಲೆಕ್ಕಪತ್ರ ಮಂಡಿಸಿದರು. ವೇದಿಕೆಯ ಗೌರವಾಧ್ಯಕ್ಷ ಡಿ. ಗೋಪಾಲಕೃಷ್ಣ ಕಾಮತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹೊಸ ಸದಸ್ಯರನ್ನು ಇದೇ ಸಂದರ್ಭದಲ್ಲಿ ಪರಿಚಯಿಸಲಾಯಿತು. ಸಭೆಗೆ ಆಗಮಿಸಿದ ಬೈಂದೂರು ಹಾಗೂ ಕೋಟ ಗಿಳಿಯಾರು ಹಿರಿಯ ನಾಗರಿಕ ವೇದಿಕೆಯ ಪದಾಧಿಕಾರಿಗಳನ್ನು ಗುರುತಿಸಲಾಯಿತು. ಶ್ರೀ ಪಾಂಡುರಂಗ ಪೈ ಕಾರ್ಯಕ್ರಮ ನಿರೂಪಿಸಿದರು. ಶ್ರೀ ರಾಜೀವಶೆಟ್ಟಿ ಸ್ವಾಗತಿಸಿ, ಕೆ. ಚಂದ್ರಶೇಖರ ಶೆಟ್ಟಿ ವಂದಿಸಿದರು.
