ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯ ಎಂದು ಪರಿಗಣಿತವಾಗಿರುವ ಉತ್ಕೃಷ್ಟ ಸಂಸ್ಥೆಯು ಸಂಶೋಧಕರು, ನವೋದ್ಯಮಿಗಳು ಹಾಗೂ ಉದ್ಯಮಿಗಳಿಗಾಗಿ ಒಂದು ದಿನದ ಐಪಿಟುಇ360 – ‘ಜ್ಞಾನಸ್ವಾಮ್ಯದಿಂದ ಔದ್ಯಮಿಕ ಬಳಕೆಯತ್ತ: ಸಮಗ್ರ ದೃಷ್ಟಿಕೋನ’ ಎಂಬ ವಿಷಯದ ಕುರಿತು ಕಾರ್ಯಾಗಾರವನ್ನು ಸೆಪ್ಟೆಂಬರ್ 10ರಂದು ಸಂಯೋಜಿಸಿದ್ದು ಅದು ಇಂದು ಮಣಿಪಾಲದ ಡಾ. ಟಿಎಂಎ ಪೈ ಸಭಾಂಗಣದಲ್ಲಿ ಉದ್ಘಾಟನೆಗೊಂಡಿತು. ಸಂಶೋಧನೆ, ನಾವೀನ್ಯ ಮತ್ತು ಉದ್ಯಮಶೀಲ ಪರಿಸರವನ್ನು ಬಲಪಡಿಸುವ ಉದ್ದೇಶದ ಮರೈನ್– [ಮಣಿಪಾಲ್ ಆಕ್ಸಿಲರೇಟಿಂಗ್ ರೀಸರ್ಚ್, ಇನ್ನೋವೇಶನ್ ಆ್ಯಂಡ್ ಎಂಟರ್ಪ್ರಿನರ್ಶಿಪ್] ಕಾರ್ಯಯೋಜನೆಯ ಮೂಲಕ ಈ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಾಹೆಯ ಕುಲಪತಿ ಡಾ. ಶರತ್ ಕೆ. ರಾವ್ ಅವರು ಮಾತನಾಡುತ್ತ, ‘ಸಂಶೋಧನೆಯು ಜ್ಞಾನಸೃಷ್ಟಿಗೆ ಸೀಮಿತವಾಗದೆ ಅರ್ಥಪೂರ್ಣ ಫಲಿತಾಂಶವನ್ನು ಕಂಡುಕೊಳ್ಳಬೇಕು ಮತ್ತು ಸಾಮಾಜಿಕ ಪರಿಣಾಮವನ್ನು ಉಂಟುಮಾಡುವಂತಾಗಬೇಕು’ ಎಂದರು. ಬೌದ್ಧಿಕ ಆಸ್ತಿ ಒಬ್ಬರ ಪೇಟೆಂಟ್ ಆಗಬಾರದು. ಅದಕ್ಕಿಂತ ಹೆಚ್ಚಾಗಿ ಅದನ್ನು ಸಮಾಜಕ್ಕೆ ಉಪಯುಕ್ತವಾಗಿ ಪರಿವರ್ತಿಸಲು ಶಿಕ್ಷಣ ಸಂಸ್ಥೆಗಳು ಪ್ರಯತ್ನಿಸಬೇಕು. ಈ ನಿಟ್ಟಿನಲ್ಲಿ ಮಾಹೆ ರಚನಾತ್ಮಕ ಹೆಜ್ಜೆಗಳನ್ನಿರಿಸಿದೆ. ಶಿಕ್ಷಣ ಸಂಸ್ಥೆಗಳು, ಉದ್ಯಮ ವಲಯ ಮತ್ತು ಹಳೆವಿದ್ಯಾರ್ಥಿಗಳ ಸಹಭಾಗಿತ್ವದ ಸದೃಢ ವ್ಯವಸ್ಥೆಯನ್ನು ರೂಪಿಸುವ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಅಮರಾವತಿಯ ಬಿಎಲ್ಐ ಕನ್ಸಲ್ಟೆನ್ಸಿ ಪ್ರೈವೇಟ್ ಲಿಮಿಟೆಡ್ನ ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ವಪ್ನಿಲ್ ಜಯಂತ್ ಗವಾಂಡೆ ಅವರು ಮಾತನಾಡುತ್ತ, ’ಶಿಕ್ಷಣ ಸಂಸ್ಥೆಗಳು ಕೇವಲ ಪೇಟೆಂಟ್ಗಳ ಸಂಖ್ಯೆಯನ್ನು ಹೆಚ್ಚಿಸುವುದಕ್ಕೆ ಒತ್ತು ನೀಡದೆ, ಅವುಗಳನ್ನು ವಾಣಿಜ್ಯಿಕವಾಗಿ ಮುಕ್ತವಾಗಿಸಬೇಕು ಮತ್ತು ಬಳಕೆಯನ್ನು ಕೂಡ ಮುಕ್ತವಾಗಿಸಲು ಆದ್ಯತೆ ನೀಡಬೇಕು’ ಎಂಬ ಅಭಿಪ್ರಾಯ ಪಟ್ಟರು.
ಮತ್ತೋರ್ವ ಅತಿಥಿ ಮಾಹೆಯ ತಂತ್ರಜ್ಞಾನ ಮತ್ತು ವಿಜ್ಞಾನ ವಿಭಾಗದ ಸಹ ಕುಲಪತಿ ಡಾ. ಕರುಣಾಕರ ಎ. ಕೋಟೆಗಾರ್ ಅವರು, ‘ಶಿಕ್ಷಣ ವ್ಯವಸ್ಥೆಯಲ್ಲಿ ಸಂಶೋಧನ ಪ್ರಕಟಣೆಗಳು ಮತ್ತು ಕೃತಿಸ್ವಾಮ್ಯಗಳು ಅಗತ್ಯ. ಆದರೆ, ಅವು ಅಷ್ಟಕ್ಕೇ ಸೀಮಿತವಾಗಬಾರದು. ಸೈದ್ಧಾಂತಿಕ ಹಂತವನ್ನು ದಾಟಿ, ಸಮಾಜಕ್ಕೆ ಅದು ಕ್ರಿಯಾಶೀಲವಾದ ಪರಿಣಾಮ ಬೀರುವಂತೆ ಮಾಡಬೇಕು. ಬೌದ್ಧಿಕ ಜ್ಞಾನವನ್ನು ಔದ್ಯಮಿಕವಾಗಿ ಉಪಯುಕ್ತವಾಗಿಸುವಲ್ಲಿ ಯತ್ನಶೀಲರಾಗಬೇಕು’ ಎಂದರು.
ಇದೇ ಸಂದರ್ಭದಲ್ಲಿ ಲೆಕ್ಸ್ಟ್ರಿಯಾ ರಿಸರ್ಚ್ ಅಭಿವೃದ್ಧಿಪಡಿಸಿದ ಪೇಟೆಂಟ್ ಮಾಹಿತಿ ಕೋಶವನ್ನು ಅನಾವರಣಗೊಳಿಸಲಾಯಿತು. ಪೇಟೆಂಟ್ಗಳಿಗೆ ಸಂಬಂಧಿಸಿದ ವಿವರ, ಒಳನೋಟ ಮತ್ತು ವಿಶ್ಲೇಷಣೆಯನ್ನು ಒದಗಿಸುವ ಈ ಮಾಹಿತಿ ಕೋಶವು ಸಂಶೋಧಕರು ಹಾಗೂ ನವೋದ್ಯಮಿಗಳಿಗೆ ಪೇಟೆಂಟ್ನ್ನು ಪರಿಣಾಮಕಾರಿಯಾಗಿ ಅರ್ಥಮಾಡಿಕೊಳ್ಳಲು ಮತ್ತು ಬಳಸಿಕೊಳ್ಳಲು ಸಹಕಾರಿಯಾಗಲಿದೆ.
ಈ ಕಾರ್ಯಾಗಾರವನ್ನು ಮಣಿಪಾಲ ಯುನಿವರ್ಸಲ್ ಟೆಕ್ನಾಲಜಿ ಬಿಸಿನೆಸ್ ಇನ್ಕ್ಯುಬೇಟರ್ (ಎಂಯುಟಿಬಿಐ), ಭಾರತ ಸರ್ಕಾರದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಸ್ಟಾರ್ಟಪ್ ಹಬ್ ನ ಬೆಂಬಲದೊಂದಿಗೆ, ಮಿಡಾಸ್ ಡಿಎಸ್ಟಿ–ಮಾಹೆ ಹಬ್, ಮಾಹೆ ಸಂಶೋಧನಾ ನಿರ್ದೇಶನಾಲಯ, ಮಾಹೆ ಕಾರ್ಪೊರೇಟ್ ವ್ಯವಹಾರಗಳ ನಿರ್ದೇಶನಾಲಯ, ಮಾಹೆ ಇನ್ನೋವೇಶನ್ ಸೆಂಟರ್ ಹಾಗೂ ಮಣಿಪಾಲ ಬಯೋಇನ್ಕ್ಯುಬೇಟರ್ ಸಂಸ್ಥೆಗಳ ಸಂಯುಕ್ತ ಸಹಕಾರದಲ್ಲಿ ಆಯೋಜಿಸಲಾಗಿತ್ತು .
ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೊಫೆಷನ್ಸ್ನ ಡೀನ್ ಹಾಗೂ ಮಿಡಾಸ್ ಡಿಎಸ್ಟಿ–ಮಾಹೆ ಹಬ್ನ ಪ್ರಧಾನ ಸಂಯೋಜಕ ಡಾ. ಅರುಣ್ ಜಿ. ಮಯ್ಯ, ಮಾಹೆ ಸಂಶೋಧನ ನಿರ್ದೇಶನಾಲಯದ ನಿರ್ದೇಶಕ ಡಾ. ನವೀನ್ ಸಾಲಿನ್ಸ್, ಮಾಹೆ ಇನ್ನೋವೇಶನ್ ಸೆಂಟರ್ನ ಸಿಐಒ ಡಾ. ಮೊಹಮ್ಮದ್ ಜುಬೇರ್ ಹಾಗೂ ಮಣಿಪಾಲ ಬಯೋಇನ್ಕ್ಯುಬೇಟರ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಮನೇಶ್ ಥಾಮಸ್ ಉದ್ಘಾಟನ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಕಾರ್ಯಾಗಾರದಲ್ಲಿ ಆರ್ವಿ ವಿಶ್ವವಿದ್ಯಾಲಯದ ಪ್ರಾಕ್ತನ ವಿದ್ಯಾರ್ಥಿ ವ್ಯವಹಾರಗ ವಿಭಾಗದ ನಿರ್ದೇಶಕ ಡಾ. ಫಣಿಕುಮಾರ್ ಪುಲ್ಲೇಲ, ಮಾಹೆಯ ಪೇಟೆಂಟ್ ಮತ್ತು ತಂತ್ರಜ್ಞಾನ ಅಭಿವೃದ್ಧಿ ವಿಭಾಗದ ಉಪನಿರ್ದೇಶಕ ಡಾ. ಎಸ್. ವರದರಾಜನ್, ಲೆಕ್ಸ್ಟ್ರಿಯಾ ರಿಸರ್ಚ್ನ ವ್ಯವಸ್ಥಾಪಕ ಪಾಲುದಾರರಾದ ಪ್ರಣವ್ ಭಟ್ ಹಾಗೂ ಸ್ವಪ್ನಿಲ್ ಜಯಂತ್ ಗವಾಂಡೆ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯಾಗಾರವನ್ನು ನಡೆಸಿಕೊಟ್ಟರು.
ಎಂಯುಟಿಬಿಐ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಾರ್ಯಕ್ರಮದ ಸಂಯೋಜಕ ಡಾ. ಸಂತೋಷ ರಾವ್ ಸ್ವಾಗತಿಸಿದರು. ಎಂಯುಟಿಬಿಐ ವ್ಯವಸ್ಥಾಪಕಿ ಅಶ್ಮಿತಾ ವಂದನಾರ್ಪಣೆ ಸಲ್ಲಿಸಿದರು. ಸ್ಕೂಲ್ ಆಫ್ ಕಂಪ್ಯೂಟರ್ ಇಂಜಿನಿಯರಿಂಗ್ನ ಸಹ ಪ್ರಾಧ್ಯಾಪಕಿ ಡಾ. ನಿಶಾ ಪಿ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
