Header Ads Widget

ಶ್ರೀ ಮಧ್ವಾಚಾರ್ಯ ಥೀಮ್ ಪಾರ್ಕ್ : ಪ್ರಥಮ ಸಮಾಲೋಚನಾ ಸಭೆ

ಉಡುಪಿ ಮಲ್ಪೆ ಸಮುದ್ರ ತೀರದ ಬಳಿ ಉಡುಪಿಯ ಮಾಧ್ವ ಮಠಗಳಿಂದ ಭಕ್ತರ ಸಹಯೋಗದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಬಹುಕೋಟಿ ವೆಚ್ಚದ ಶ್ರೀ ಮಧ್ವಾಚಾರ್ಯ ಥೀಮ್ ಪಾರ್ಕ್ ಸಂಬಂಧಿಸಿ ಪ್ರಥಮ ಸಮಾಲೋಚನಾ ಸಭೆಯು ಬುಧವಾರ ಸಂಜೆ ಉಡುಪಿ ಪಲಿಮಾರು ಮಠದಲ್ಲಿ ನಡೆಯಿತು.

ಜಗದ್ಗುರು ಶ್ರೀ ಮಧ್ವಾಚಾರ್ಯರ ಜೀವನ ವೃತ್ತಾಂತ, ಮಹಿಮೆ, ಅವರು ಪ್ರತಿಪಾದಿಸಿದ ತತ್ವ ಸಿದ್ಧಾಂತಗಳನ್ನು ಬಹಳ ಅರ್ಥಪೂರ್ಣವಾಗಿ ಬಿಂಬಿಸುವ ದೃಷ್ಟಿಯಿಂದ ಈ ಥೀಮ್ ಪಾರ್ಕ್ ನಿರ್ಮಿಸಲಾಗುತ್ತಿದೆ. ಮಧ್ವ ಗುರುಗಳಿಗೆ ದ್ವಾರಕೆಯಿಂದ ಸಮುದ್ರಮಾರ್ಗವಾಗಿ ಬಂದ ಶ್ರೀ ಕೃಷ್ಣ ಒಲಿದ ಮಲ್ಪೆಯ ಸಮುದ್ರ ತೀರದಲ್ಲೇ ಈ ನಿರ್ಮಾಣ ಎಲ್ಲ ರೀತಿಯಿಂದಲೂ ಔಚಿತ್ಯಪೂರ್ಣವಾದುದು ಎಂದು ಅರಿತು ಅಲ್ಲೇ ವಿಶಾಲವಾದ ಭೂಮಿಯನ್ನು ಖರೀದಿಸಿ ನಿರ್ಮಿಸಲಾಗುತ್ತಿದೆ. ಪಲಿಮಾರು ಮಠದ ವಿದ್ಯಾರ್ಥಿಗಳು ಆರಂಭದಲ್ಲಿ ವೇದಘೋಷಗೈದು ಪ್ರಾರ್ಥಿಸಿದರು.

ಬುಧವಾರ ನಡೆದ ಸಭೆಯಲ್ಲಿ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಕಿರಿಯ ಶ್ರೀ ವಿದ್ಯಾರಾಜೇಶ್ವರ ಶ್ರೀಪಾದರು ಪೇಜಾವರ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು, ಸೋದೆ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಅದಮಾರು ಕಿರಿಯ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಭಾಗವಹಿಸಿ ಮಾರ್ಗದರ್ಶನಗೈದರು.

ಸೋದೆ ಮಠದ ಶಿಕ್ಷಣ ಪ್ರತಿಷ್ಠಾನದ ಕಾರ್ಯದರ್ಶಿ ಎಸ್ ರತ್ನಕುಮಾರ್, ಶಾಸಕ ಯಶ್ಪಾಲ್ ಸುವರ್ಣ, ಧಾರ್ಮಿಕ ಮುಖಂಡರಾದ ಬಾಲಾಜಿ ರಾಘವೇಂದ್ರ ಆಚಾರ್ಯ, ಪ್ರಸಿದ್ಧ ಆರ್ಕಿಟೆಕ್ಟ್ ಹಾಗೂ ಮಣಿಪಾಲ ಹಸ್ತಶಿಲ್ಪದ ಕಾರ್ಯದರ್ಶಿ ಹರೀಶ್ ಪೈ, ಇಂಜಿನಿಯರ್ ಗಂಗಾಧರ ರಾವ್, ಸಾಂಸ್ಕೃತಿಕ ತಜ್ಞ ಪುರುಷೋತ್ತಮ ಅಡ್ವೆ, ಯುವ ಆರ್ಕಿಟೆಕ್ಟ್ ಸಂಪ್ರೀತ್ ರಾವ್, ವಾಸ್ತು ತಜ್ಞ ಗುಂಡಿಬೈಲು ಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದು ಯೋಜನೆಯ ಸ್ವರೂಪ, ವೆಚ್ಚ ಇತ್ಯಾದಿಗಳ ಬಗ್ಗೆ ವಿಸ್ತೃತ ವಾಗಿ ಮಂಥನ ನಡೆಸಿದರು. ಯೋಜನಾ ವರದಿ ಸಿದ್ಧಪಡಿಸಲು ಹರೀಶ್ ಪೈ ನೇತೃತ್ವದಲ್ಲಿ ತಾಂತ್ರಿಕ ಸಮಿತಿ ರಚಿಸಿ ನಾಲ್ಕು ತಿಂಗಳಲ್ಲಿ ಸುಂದರವಾದ ಯೋಜನಾ ವಿನ್ಯಾಸ ಸಿದ್ಧಪಡಿಸುವಂತೆ ಸೂಚಿಸಲಾಯಿತು.‌ ಸಾಮಾಜಿಕ ಕಾರ್ಯಕರ್ತ ವಾಸುದೇವ ಭಟ್ ಪೆರಂಪಳ್ಳಿ ಸಭಾ ಸಂಯೋಜನೆಯಲ್ಲಿ ಸಹಕರಿಸಿ ಸ್ವಾಗತ ಮತ್ತು ವಂದನಾರ್ಪಣೆಗೈದರು.