ನಾಲ್ಕು ವರ್ಷಗಳ ಹಿಂದೆ ಹುಟ್ಟಿದ ಶಿವಳ್ಳಿ ಕುಟುಂಬ, ನಾರ್ತ್ ಅಮೇರಿಕ ಈಗ ಸಾವಿರ ಕುಟುಂಬಗಳನ್ನು ಜೊತೆಗೂಡಿಸಿ ಬೆಳೆದ ದೊಡ್ಡ ಮಟ್ಟದ ಸ್ವಂಸ್ಥೆ . ಕರಾವಳಿ ಮೂಲದ ಬ್ರಾಹ್ಮಣ ಸಮುದಾಯವನ್ನು ಅಮೇರಿಕ ಮತ್ತು ಕೆನಡಾ ನೆಲದಲ್ಲಿ ಒಂದುಗೂಡಿಸಿ, ತಮ್ಮ ಕಲೆ, ಸಂಸ್ಕ್ರತಿಯನ್ನು ಬೆಳೆಸಿ ಮುಂದಿನ ಜನಾಂಗದ ಜೊತೆ ಹಂಚಿಕೊಳ್ಳುವ ಪ್ರಮುಖ ಧ್ಯೇಯವನ್ನು ಹೊಂದಿರುವ ಸ್ವಂಸ್ಥೆ ಇದೇ ಏಪ್ರಿಲ್ 18- ಏಪ್ರಿಲ್ 20 ರಂದು 'ಸಮ್ಮಿಲನ-2' ಸಮಾರಂಭವನ್ನು ತುಂಬಾ ಸಡಗರದಿಂದ ಆಚರಿಸಿತು.
ಎರಡು ವರ್ಷಕ್ಕೆ ಒಮ್ಮೆ ಆಯೋಜಿಸುವ ಸಮ್ಮಿಲನ ಸಮಾರಂಭವು ನ್ಯೂ ಜರ್ಸಿಯಲ್ಲಿ ನಡೆಯುತ್ತದೆ ಎಂದು ಪ್ರಕಟಿಸಿದ ಎರಡು ವಾರದಲ್ಲಿ ಅಮೇರಿಕಾದ ನಾನಾ ಕಡೆಯಲ್ಲಿ ವಾಸಿಸುತ್ತಿರುವ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಸಮಾರಂಭಕ್ಕೆ ನೋಂದಣಿ ಮಾಡಿಕೊಂಡಿದ್ದರು. ಪ್ರಥಮ ಸಮ್ಮಿಲನ 2023 ಅಲ್ಲಿ ಟೆಕ್ಸಾಸ್ ನಲ್ಲಿ ತುಂಬಾ ಯಶಸ್ವಿಯಾಗಿ ನೆರವೇರಿತ್ತು. ಊರಿನ ವಿವಿಧ ಊಟೋಪಚಾರಗಳ, ಸಾಂಸ್ಕೃತಿಕ ಕಾರ್ಯಕ್ರಮಗಳ ರುಚಿಯನ್ನು ಸವಿದಿದ್ದ ಸದಸ್ಯರು ಉತ್ಸುಕರಾಗಿ ನೋಂದಾಯಿಸಿಕೊಂಡದ್ದರಲ್ಲಿ ಆಶ್ಚರ್ಯವೇನಿರಲಿಲ್ಲ. ಅಷ್ಟೇ ಅಲ್ಲದೇ ಕುಟುಂಬ ಕಳೆದೆರಡು ವರುಷಗಳಲ್ಲಿ ಬೆಳೆದು ಈಗ 1000 ಚಂದಾದಾರರನ್ನು ಹೊಂದಿದೆ.
ಮೂರು ದಿನಗಳ ಸಮ್ಮಿಲನ-೨, ಕರವಾಳಿ ಮೂಲದ ವಿಪ್ರ ಸಮುದಾಯದ ಕಲೆ, ಸಂಸ್ಕ್ರತಿಯನ್ನು ಪ್ರತಿಯೊಬ್ಬ ಸದಸ್ಯರ ಮನಮುಟ್ಟಿದ್ದಷ್ಟೇ ಅಲ್ಲದೇ ಮುಂದಿನ ಸಮ್ಮಿಲನವನ್ನು ಎದುರು ನೋಡುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ. ಪ್ರತಿದಿನದ ಕಾರ್ಯಕ್ರಮ ಪಟ್ಟಿಯು ಅದರ ಹಿಂದೆ ಸಮಿತಿಗಳ ಮತ್ತು ಕಾರ್ಯಕರ್ತರ ಸೂಕ್ಷ್ಮ ಆಲೋಚನೆ ಎಷ್ಟರ ಮಟ್ಟಿಗೆ ಎಂದು ಎತ್ತಿ ತೋರಿಸಿತ್ತು. ಶ್ರೀಯುತ ಸಂತೋಷ್ ಗೋಳಿಯವರ ಅಧ್ಯಕ್ಷತೆಯಲ್ಲಿ ಕಾರ್ಯಕಾರಿ ಸಮಿತಿಯು ಪಟ್ಟ ಶ್ರಮ ಶ್ಲಾಘನೀಯ.
ಅಮೇರಿಕಾ ನೆಲದಲ್ಲಿ ಹುಟ್ಟಿ, ಬೆಳೆದ ಶಿವಳ್ಳಿ ಕುಟುಂಬದ ಯುವ ಪೀಳಿಗೆ ನಮ್ಮ ಆಚಾರ ವಿಚಾರಗಳನ್ನು ಒಪ್ಪಿ, ಅಪ್ಪುವಂತೆ ಪ್ರೋತ್ಸಾಹಿಸುವುದು ಕಷ್ಟದ ಕೆಲಸವೇ. ಕೆಲವೊಮ್ಮೆ ಗೋರ್ಕಲ್ಲ ಮೇಲೆ ನೀರೆರದಂತೆ ಅನ್ನಿಸಲೂ ಬಹುದು. ಸಪ್ತ ಸಾಗರ ದಾಟಿ, ದೂರದ ದೇಶದಲ್ಲಿ ನೆಲೆಯನ್ನು ನೋಡುವ ಪ್ರಯತ್ನದಲ್ಲಿ ತಮ್ಮ ಕಲೆಯನ್ನು ಸ್ವಲ್ಪ ಕಡೆಗಣಿಸಿದ ಕುಟುಂಬದ ಧಾರ್ಮಿಕ ಬೇರು ಸಹ ಸ್ವಲ್ಪ ಸಡಿಲವಾಗಿದ್ದಲ್ಲಿ ಆಶ್ಚರ್ಯವೇನಿಲ್ಲ. ಇದನ್ನು ಅರಿತಿದ್ದ ಕಾರ್ಯಕಾರಿ ಸಮಿತಿ ಮೊದಲ ದಿನವನ್ನು ಧಾರ್ಮಿಕ ದಿನವಾಗಿ ಮಾಡಿದ್ದು ಅವರ ಯೋಚನಾಲಹರಿಯನ್ನು ಒತ್ತಿ ಹೇಳುತ್ತದೆ. ಉಡುಪಿ ಶ್ರೀಕೃಷ್ಣನ ಮಡಿಲಲ್ಲಿನ ವಿಪ್ರಭಾಂದವರೆಲ್ಲ ನ್ಯೂ ಜರ್ಸಿಯ ಕೃಷ್ಣ ವೃಂದಾವನದಲ್ಲಿ ಸೇರಿ ತಮ್ಮ ಸಮ್ಮಿಲನದ ಮೊದಲನೇ ದಿನವನ್ನು ಕಳೆದರು. ಶ್ರೀಕೃಷ್ಣನ ಕೃಪಾಕಟಾಕ್ಷ ಮತ್ತು ದುರ್ಗೆಯ ಆಶೀರ್ವಾದ ಇರಲಿ ಎಂದು ಕೃಷ್ಣ ವೃಂದಾವನದಲ್ಲಿಆಯೋಜಿಸಿದ್ದ ದುರ್ಗಾ ಪೂಜೆಯು ಧಾರ್ಮಿಕ ದಿನದ ವಿಶಿಷ್ಟತೆಯನ್ನು ಮತ್ತು ವಿಪ್ರ ಭಾಂದವರ ಆಚಾರ ವಿಚಾರವನ್ನು ತೋರಿಸಿತು.
ಕೃಷ್ಣ ವೃಂದಾವನದ ಪ್ರಮುಖ ಅರ್ಚಕರಾದ ವಿದ್ವಾನ್ ಶ್ರೀ ಯೋಗಿಂದ್ರ ಆಚಾರ್ಯರು ದೀಪ ಬೆಳಗಿಸಿ, ಭಾಷೆ, ಆಚಾರ, ವಿಚಾರಗಳು ಒಂದು ಸಮುದಾಯವನ್ನು ಹೇಗೆ ಒಂದುಗೂಡಿಸುತ್ತದೆ ಅನ್ನುವುದನ್ನು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು. ಆ ನಿಟ್ಟಿನಲ್ಲಿ ಶಿವಳ್ಳಿ ಕುಟುಂಬ ತಮ್ಮ ಪ್ರಯತ್ನವನ್ನು ತಮ್ಮ ಸದಸ್ಯರಿಗೆ ತುಳು ತರಗತಿಯ ಮೂಲಕ ನೀಡಿತ್ತು. ಕಲಿಕೆಯನ್ನು ತರಗತಿಗೆ ಮೀಸಲಿಡದೆ ಶಿವಳ್ಳಿ ತುಳು ಪುಸ್ತಕವನ್ನು ಸಹ ಆ ದಿನ ಹೊರತಂದಿತ್ತು. ಕುಟುಂಬದ ಪಬ್ಲಿಕೇಷನ್ ಸಮಿತಿ ತರುವ ತ್ರೈಮಾಸಿಕ ಪತ್ರಿಕೆ ಸಮ್ಮಿಲನ-2 ನ ವಿಶೇಷ ಸಂಚಿಕೆಯಾಗಿ 'ಸಂಪೂರ್ಣ'ವನ್ನು ಆ ದಿನ ಬಿಡುಗೊಡೆಗೊಳಿಸಿತು. ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ತಮ್ಮ ಅನುಗ್ರಹ ಸಂದೇಶದಲ್ಲಿ'ನಮ್ಮ ತುಳುನಾಡಿನ ಸೊಗಡು ಸಂಸ್ಕ್ರತಿಯನ್ನು ಸಾಗರೋತ್ತರದಲ್ಲಿ ಉಳಿಸುವ, ಪರಿಚಯಿಸುವ ಈ ಕಾರ್ಯ ಸ್ತುತ್ಯರ್ಹಮಾಗಿದ್ದು ಅತ್ಯಂತ ಅರ್ಥಪೂರ್ಣವಾಗಿ ನಡೆಯಲಿ' ಎಂದು ಆಶೀರ್ವದಿಸಿದರು.
ಶಿವಳ್ಳಿ ಕುಟುಂಬದ ಪ್ರತಿಭೆಗಳ ಕಿರು ಪರಿಚಯ ಮೊದಲ ದಿನದ ಕಾರ್ಯಕ್ರಮದಲ್ಲಿ ತೋರಿಸಿಕೊಡಲಾಯಿತು. ರಾಗಾರ್ಚನೆ, ನಾದಾರ್ಚನೆಯ ಮೂಲಕ ಹಲವು ಸಂಗೀತ ವಿದುಷಿಗಳು ಹಾಡಿದ ಹಾಡುಗಳನ್ನು ನೆರೆದ ಸದಸ್ಯರೆಲ್ಲರೂ ಆನಂದಿಸಿದರು. ತದನಂತರ ವಿಭಿನ್ನ ರೀತಿಯ ನಾಟ್ಯಗಳ ಪರಿಚಯವನ್ನು ಪ್ರತಿಭಾವಂತ ನೃತ್ಯಗಾರ್ತಿಯರು ತೋರಿಸಿಕೊಟ್ಟರು.
ಪತ್ರೊಡೆ ಸಹಿತ ಕರವಾಳಿಯ ವಿಶೇಷ ಖಾದ್ಯಗಳ ಮೆರವಣಿಗೆ ಮಧ್ಯಾಹ್ನದ ಬಾಳೆ ಎಲೆ ಊಟದಲ್ಲಿದ್ದು, ಊಟ ಮಾಡಿದ ಎಲ್ಲರಲ್ಲಿ ಒಂದು ಸಾರಿ ಊರಿನ ಹಳೆಯ ನೆನಪುಗಳನ್ನು ಮರುಕಳಿಸುವಂತೆ ಮಾಡಿತ್ತು.
ಸಮ್ಮಿಲನದ ಎರಡನೇ ದಿನವು ಸಾಂಸ್ಕ್ರತಿಕ ದಿನವಾಗಿದ್ದು, ಕುಟುಂಬದ ವಿಶಿಷ್ಟ ಕಲೆಗಳನ್ನು ಸದಸ್ಯರಿಗೆ ಉಣಬಡಿಸಲು ಕಾರ್ಯಕಾರಿ ಸಮಿತಿ ಸಿದ್ಧವಾಗಿತ್ತು.
ಸಾಂಸ್ಕ್ರತಿಕ ದಿನವು ಕುಟುಂಬದ ಸದಸ್ಯರನ್ನು ಮನೋರಂಜಿಸಲು ಹಲವು ತರದ ಕಾರ್ಯಕ್ರಮದ ಮೆರವಣಿಗೆಯನ್ನು ಯೋಜಿಸಲಾಗಿತ್ತು. ಕಾರ್ಯಕ್ರಮದ ಮೆರವಣಿಗೆಯ ಮಂಚೂಣಿಯಲ್ಲಿ ಇದ್ದದ್ದು ಮೆರವಣಿಗೆ ಕಾರ್ಯಕ್ರಮ. ಇದರಲ್ಲಿ ಕರಾವಳಿಯ ಅನನ್ಯ ಕಲೆಗಳ ನಮೂನೆಯನ್ನು ಸದಸ್ಯರಿಗೆ ಪರಿಚಯಿಸಲಾಯಿತು. ಯಕ್ಷಗಾನದ ವೇಷ, ಕೋಲಾಟ, ಹುಲಿ ವೇಷ ಎಂದು ವಿಭಿನ್ನ ಕಲೆಗಳನ್ನು ನೋಡುವ ಅವಕಾಶ ನೆರೆದವರಿಗೆಲ್ಲ ದೊರೆಯಿತು.
ಕಾರ್ಯಕ್ರಮದ ಗಣ್ಯ ಅತಿಥಿಗಳಾಗಿ ಡಾ|. ಪಿ.ಎಸ್ ಚಂದ್ರಶೇಖರ್ ಮತ್ತು ಕಾಂತಿ ಚಂದ್ರಶೇಖರ್ ಅವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಕುಟುಂಬದ ಚೆರ್ ಮ್ಯಾನ್ ಆದ ಶ್ರೀಶ ಜೈಸೀತಾರಾಂ ಸಹ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಾ| ಕೇಶವರಾಜ್ ಅವರು ರಚಿಸಿದ ಸಮ್ಮಿಲನ-2ರ ಧ್ಯೇಯ ಗೀತೆಯನ್ನು ವಿದುಷಿ ರಾಜರಾಜೇಶ್ವರಿಯವರ ಸಾರಥ್ಯದಲ್ಲಿ ಸಂಗೀತ ರೂಪದಲ್ಲಿ ಉಣಬಡಿಸಲಾಯಿತು. ಸಮ್ಮಿಲನದ ಮಹತ್ವವನ್ನು ಎದ್ದು ತೋರಿಸಿದ ಧ್ಯೇಯ ಗೀತೆಯು ನೆರೆದವರ ಮನವನ್ನು ಗೆದ್ದಿತ್ತು.
ಒಂದು ಸಮುದಾಯವು ಬೆಳೆಯಬೇಕೆಂದರೆ ಸ್ವಯಂಸೇವಕರ ಕೊಡುಗೆ ಮಹತ್ವದ್ದಾಗಿರುತ್ತದೆ. ಅದರಲ್ಲೂ ಯುವ ಜನತೆಯ ಕೊಡುಗೆ ಇನ್ನೂ ಹೆಚ್ಚು ಮ್ರಮುಖವಾಗಿರುತ್ತದೆ. ಅದೇ ರೀತಿ ಶಿವಳ್ಳಿ ಕುಟುಂಬ ಬೆಳೆಯಲು ಸಹ ಹಲವಾರು ಸ್ವಯಂಸೇವಕರು ತನು, ಮನ, ಧನ ಕೊಟ್ಟು ಸಹಕರಿಸಿದ್ದರು. ಅವರ ಕೆಲಸವನ್ನು ಗುರುತಿಸಿ ವಿವಿಧ ಪ್ರಶಸ್ತಿಗಳನ್ನು ಮೊದಲಿಗೆ ಹಂಚಲಾಯಿತು . ಕುಟುಂಬ ಅವಾರ್ಡ್ ಮತ್ತು ಯುವ ಪ್ರತಿಭೆ ಪುರಸ್ಕಾರದಡಿ ಗಣ್ಯ ಕೆಲಸ ಮಾಡಿದವರನ್ನು ಸನ್ಮಾನ ಮಾಡಲಾಯಿತು. ಡಾ|ರಾಮಮೋಹನ್ ರಾವ್ ಮತ್ತು ರಜನಿ ರಾವ್, ಡಾ|ಥಾಕುರ್ ಆಚಾರ್ಯ ವ್ಯಾಸ್, ಪಾಂಡುರಂಗ ಮಟ್ಟಿ ರಾವ್, ವಿದ್ವಾನ್ ಯೋಗಿಂದ್ರ ಭಟ್ ಉಳಿ ಅವರನ್ನು ಪುರಸ್ಕರಿಸಲಾಯಿತು. ಯುವ ಪ್ರತಿಭೆಗಳಾದ ವಿಭಾ ಭಟ್, ಪ್ರಹ್ಲಾದ್ ಪಿ ರಾವ್, ತ್ರಿಷಾ ಬಳ್ಳಾಕುರ್, ಮತ್ತು ಸಾರ್ಥಕ್ ಪಿ ರಾವ್ ಅವರನ್ನು ಕೂಡ ಪುರಸ್ಕರಿಸಲಾಯಿತು.
ಯಾವುದೇ ಸಭಾ ಕಾರ್ಯಕ್ರಮ ಎಂದರೆ ಸಂಗೀತ, ನರ್ತನ ಇಲ್ಲವಿಂದರೆ ಆದೀತೆ? ಹಾಗೆಯೇ ಇಲ್ಲೂ ಕುಟುಂಬದ ಪ್ರತಿಭಾವಂತ ಹಾಡುಗರು ಮತ್ತು ನರ್ತಕಿಯರು ತಮ್ಮ ಪ್ರತಿಭೆಯನ್ನು ಸದಸ್ಯರಿಗೆ ತೋರಿಸಿಕೊಟ್ಟರು. ಸ್ಥಳೀಯ ವಿಭಾಗದ ಸದಸ್ಯರು 30 ನಿಮಿಷದ ವಿಶಿಷ್ಟವಾದ ನ್ರತ್ಯ ರೂಪಕದಲ್ಲಿ ಎಲ್ಲಾ ವಯಸ್ಸಿನ ಪ್ರದರ್ಶಕರಿಗೆ ಅವಕಾಶವನ್ನು ನೀಡಿದ್ದು ಒಂದು ಅಪುರೂಪದ ವಿಷಯವಾಗಿತ್ತು. ಕುಟುಂಬದ ತುಳು ತರಗತಿಯಿಂದ ತುಳು ಕಲಿತವರನ್ನು ಸೇರಿಸಿ ಒಂದು ತುಳು ನಾಟಕವನ್ನು ಸಹ ಮಾಡಿ ಜನರ ಮುಖದಲ್ಲಿ ನಗುವು ಹರಿಯುವಂತೆ ಮಾಡಿದ್ದರು.
ಕರಾವಳಿಯ ನೆಚ್ಚಿನ, ಮೆಚ್ಚಿನ ಕಲೆ ಯಕ್ಷಾಗಾನವಿಲ್ಲವೆಂದರೆ ಸಭಾ ಕಾರ್ಯಕ್ರಮ ಪರಿಪೂರ್ಣವಾಗುವುದೆಂತು? ಅದು ಇಲ್ಲದಿದ್ದರೆ ಊಟದಲ್ಲಿ ಉಪ್ಪಿನಕಾಯಿ ಇಲ್ಲವಾದಂತೆ ಅದು ಕೂಡ ಸಂತೃಪ್ತಿಯನ್ನು ನೀಡುವುದಿಲ್ಲ. ಅದನ್ನರಿತ ಕಾರ್ಯಕಾರಿ ಸಮಿತಿ ಕುಟುಂಬದಲ್ಲೇ ಇರುವ ಯಕ್ಷಗಾನ ಪ್ರತಿಭೆಗಳಿಂದ ಶಿವಳ್ಳಿ ತುಳು ಮತ್ತು ಕನ್ನಡ ಮಿಶ್ರಿತವಾದ ಒಂದು ಅಧ್ಭುತ ಪ್ರಸಂಗ 'ಮೈಂದ ದ್ವಿವಿದ ಕಾಳಗ' ಯಕ್ಷಗಾನ ಪ್ರದರ್ಶಿಸಿತ್ತು. ರಾಜೇಂದ್ರ ಕೆದ್ಲಾಯರವರ ನೇತೃತ್ವದಲ್ಲಿ ನಡೆದ ಈ ಪ್ರಸಂಗವನ್ನು ಎಲ್ಲ ವಯಸ್ಸಿನ ಜನರೂ ಕುಳಿತು ನೋಡಿ ಆನಂದಿಸಿದರು.
ಅಮೇರಿಕಾದಲ್ಲಿ ಹುಟ್ಟಿ ಬೆಳೆದ ಮಕ್ಕಳು ದೊಡ್ಡವರಾಗಿ ಮದುವೆಯ ವಯಸ್ಸಿಗೆ ಬಂದಾಗ , ನಮ್ಮ ಸಮುದಾಯಯದವರನ್ನೇ ಬಾಳ ಸಂಗಾತಿಯಾಗಿ ಆಯ್ಕೆ ಮಾಡಿಕೊಳ್ಳಲಿ ಎಂಬುದು ಪೋಷಕರ ಆಶಯ. ಅದಕ್ಕೆ ಸಹಾಯ ಮಾಡಲು ವೈವಾಹಿಕ ವೇದಿಕೆಯನ್ನು ಸಹ ಆಯೋಜಿಸಲಾಗಿತ್ತು. ಸದಸ್ಯರು ತಮ್ಮ ಮಕ್ಕಳ ಕಿರು ಪರಿಚಯವನ್ನು ನೀಡಿ ಈ ವೇದಿಕೆಯ ಸಹಾಯವನ್ನು ತೆಗೆದುಕೊಂಡರು.
ಎಲ್ಲಾ ಕಾರ್ಯಕ್ರಮದ ನಡುವೆ ನೆರೆದ ಜನರಿಗೆ ಭಾರಿ ಭೋಜನದ ಯೋಜನೆ ಆಗಿತ್ತು. ಬೆಳಗ್ಗಿನ ಉಪಹಾರದಿಂದ ಪ್ರಾರಂಭಿಸಿ, ರಾತ್ರಿ ಊಟದ ತನಕ ಕರಾವಳಿಯ ವಿಶೇಷ ಖಾದ್ಯಗಳನ್ನು ಬಡಿಸಲಾಗಿತ್ತು.
ಕುಟುಂಬದ ಯುವ ಮಕ್ಕಳಿಂದಲೇ ಹುಟ್ಟಿದ ಸಂಗೀತ ಬ್ಯಾಂಡ್ 'ಕಲ್ಲು ಮನೆಯಿಂದ' ಮೂಡಿಬಂದ ಉತ್ತಮ ಗುಣಮಟ್ಟದ ಕನ್ನಡ ಹಾಡುಗಳನ್ನು ನೆರೆದ ಜನರು ಆನಂದಿಸಿದರು. ಬೇರೆ ದೇಶದಲ್ಲಿ ಹುಟ್ಟಿ ಬೆಳೆದ ಮಕ್ಕಳ ಬಾಯಿಂದ ಕನ್ನಡ ಹಾಡುಗಳು ಅದ್ಭುತವಾಗಿ ಕೇಳಿ ಬಂದದ್ದು ನಿಜಕ್ಕೂ ಶ್ಲಾಘನೀಯ ವಿಚಾರವೆ.
ಮಧುರ ಸಂಜೆಯನ್ನು ಕುಟುಂಬದ ಸದಸ್ಯರು ಸಂಗೀತ ರಸಮಂಜರಿಯ ಜೊತೆ ನರ್ತಿಸಿ ಆನಂದಿಸಿದರು. ಸಮ್ಮಿಲನದ ಎರಡನೇ ದಿನದ ಎಲ್ಲಾ ಸಾಂಸ್ಕ್ರತಿಕ ಕಾರ್ಯಕ್ರಮಗಳು ವಿಶಿಷ್ಟವಾಗಿ ಮೂಡಿ ಬಂದು ಪ್ರತಿಯೊಬ್ಬರ ಮನಮುಟ್ಟಿತು.
ಮೂರನೇ ದಿನದ ಸಾಮಾಜಿಕ ದಿನವು ನ್ಯೂ ಜರ್ಸಿಯ ಟಾಗೋರ್ ಹಾಲ್ ನಲ್ಲಿ ಏರ್ಪಾಡಾಗಿತ್ತು. ಎರಡು ದಿನವಿಡೀ ಕುಳಿತು ಕಾರ್ಯಕ್ರಮಗಳನ್ನು ನೋಡಿದ ಸದಸ್ಯರಿಗೆ ಇತರರ ಜೊತೆ ಸಂಪರ್ಕ ಮತ್ತು ಮಾತುಕತೆಗೆ ವಾತಾವರಣ ಸಿದ್ಧಪಡಿಸಲಾಗಿತ್ತು.
ಮೊದಲಿಗೆ ಕುಟುಂಬದ ಸದಸ್ಯರೆಲ್ಲರೂ ಸಭಾಂಗಣದಲ್ಲಿ ಯೋಗಾಸನಗಳನ್ನು ಮಾಡುವ ವ್ಯವಸ್ಥೆ. ಕುಟುಂಬದವರೆ ಆದ ವಾಣಿ ವೆಂಕಟೇಶ್ ಅವರ ನೇತ್ರತ್ವದಲ್ಲಿ ನಡೆದ ಕಾರ್ಯಕ್ರಮವನ್ನು ಭಾಗವಹಿಸಿದ ಪ್ರತಿಯೊಬ್ಬರೂ ಆನಂದಿಸಿದರು. ಹಲವು ರೀತಿಯ ಯೋಗಾಸನಗಳ ಪರಿಚಯವನ್ನು ಸದಸ್ಯರಿಗೆ ಮಾಡಲಾಯಿತು ಮತ್ತು ಮಾಡಿಸಲಾಯಿತು.
ಮುಂದಿನ ಕಾರ್ಯಕ್ರಮವು ವೆಂಕಟೇಶ್ ಅವರ ನೇತೃತ್ವದಲ್ಲಿ ನೆಡೆದ freestyle dance. ಮೂವತ್ತು ನಿಮಿಷದ ಕಾರ್ಯಕ್ರಮದಲ್ಲಿ ಸಂಗೀತಕ್ಕೆ ಸರಿಯಾಗಿ ಭಾಗವಹಿಸಿದವರು ಸಮತೋನದಲ್ಲಿ ನ್ರತ್ಯ ಮಾಡಿದರು . ಸಂಗೀತವನ್ನು ಅನುಸರಿಸಿ ಮಾಡಿದ ನ್ರತ್ಯವು ಸದಸ್ಯರಿಗೆ ಮುದವನ್ನು ನೀಡಿತು. ಯೋಗ ಮತ್ತು freestyle dance ಕುಟುಂಬದ wellness ಸಮಿತಿಯ ಕೆಳಗಡೆ ಆಯೋಜಿಸಿದ ಕಾರ್ಯಕ್ರಮವಾಗಿತ್ತು. ಈ ಎರಡು ಕಾರ್ಯಕ್ರಮಗಳನ್ನು ಕುಟುಂಬವು ತಮ್ಮ ಸದಸ್ಯರಿಗೆ ಪ್ರತಿ ವಾರ ಉಚಿತವಾಗಿ ಆಯೋಜಿಸಿದೆ.
ಮುಂದಿನ ಒಂದು ಘಂಟೆಯ ಸಮಯ ಕರಾವಳಿ ವಿಪ್ರರಿಗೆ ನಳಪಾಕ ಸ್ಪರ್ಧೆಯ ಮೂಲಕ ಅಡುಗೆಯ ಚಾಣಾಕ್ಷತೆ ತೋರಿಸುವ ಸಮಯ. ಉಳಿದ ತಂಡದವರ ಜೊತೆ ಹಾಸ್ಯ ಮಾಡುತ್ತಾ, ಸಭಾಮ೦ಟಪದಲ್ಲಿ ನಡೆಯುತ್ತಿದ್ದ ಸಂಗೀತವನ್ನು ಸವಿಯುತ್ತ ಸ್ಪರ್ಧಿಗಳು ಬೆಂಕಿ ಇಲ್ಲದೆ ತಮ್ಮ ಖಾದ್ಯಗಳನ್ನು ತಯಾರಿಸಿದರು. ಪ್ರತಿ ಒಂದು ತಂಡವೂ ಮಾಡಿದ ಖಾದ್ಯಗಳು ಶ್ಲಾಘನೀಯ. ಒಬ್ಬೊಬ್ಬರಲ್ಲೂ ಒಂದೊಂದು ರೀತಿಯ ನವೀನತೆ ಎದ್ದು ಕಾಣುತ್ತಿತ್ತು. ಅಡುಗೆ ಮಾಡಲು ಬೆಂಕಿ ಬೇಕಿಲ್ಲ. Fire in the belly ಒಂದು ಸಾಕು ಎಂಬಂತೆ ಎಲ್ಲಾ ಟೇಬಲ್ ಗಳ ಮೇಲೆ ಬಾಯಲ್ಲಿ ನೀರೂರಿಸುವಂತೆ ಮಾಡುವ ಖಾದ್ಯಗಳು ರಾರಾಜಿಸಿದವು .
ಮೂರು ದಿನಗಳ ಮೆರಗಿನ ಮೋಹಕ ಮನೋಜ್ಞ ಮಿಲನ ಸಮ್ಮಿಲನ ಕಾರ್ಯಕ್ರಮವು ಬಹು ಯಶಸ್ವಿಯಾಗಿ ಸಾಗಿ ಕುಟುಂಬದ ಸದಸ್ಯರ ಮನಮುಟ್ಟಿತ್ತು. ಇದರ ಯಶಸ್ಸು 70ಕ್ಕೂ ಹೆಚ್ಚು ಸ್ವಯಂ ಸೇವಕ ಸದಸ್ಯರ ಒಂದು ವರ್ಷಗಳ ಸತತ ಕಾರ್ಯಕ್ರಮಗಳು ಮತ್ತು ಸ್ಥಳೀಯ ಶಾಖೆಯ ಸ್ವಯಂ ಸೇವಕರಿಗೆ ಸೇರುತ್ತದೆ.ಬಾಯಿ ತುಂಬಾ ಮಾತು, ಹೊಟ್ಟೆ ತುಂಬಾ ಊಟ, ಕಣ್ತುಂಬಾ ಯಕ್ಷಗಾನ, ನಾಟಕ, ನೃತ್ಯ ಹಾಗು ಕಿವಿಯ ತುಂಬಾ ಸುಮಧುರ ಸಂಗೀತ ಕೇಳಿದ ಸದಸ್ಯರೆಲ್ಲರೂ ಮುಂದಿನ ಸಮ್ಮಿಲನ ಕಾರ್ಯಕ್ರಮಕ್ಕೆ ಎದುರು ನೋಡುವಂತೆ ಆಗಿದೆ. ಮುಂದಿನ ದಿನಗಳಲ್ಲಿ ಶಿವಳ್ಳಿ ಕುಟುಂಬದ ಸಮ್ಮಿಲನವು ಇನ್ನೂ ಅದ್ದೂರಿಯಲ್ಲಿ ನಡೆಯಲಿ, ನಮ್ಮವರ ಹೃನ್ಮನಗಳನ್ನು ಗೆಲ್ಲಲಿ, ನಮ್ಮೂರಿನ ಸೊಗಡಿನ ಅರಿವನ್ನು ಮುಂದಿನ ಜನಾಂಗಕ್ಕೆ ತಿಳಿಸುವುದರ ಮೂಲಕ ಅವರಲ್ಲೂ ಆಸೆಯನ್ನು ಬಿತ್ತಿ, ನಮ್ಮ ಸಂಸೃತಿಯನ್ನು ಮುಂದೆ ತೆಗೆದುಕೊಂಡು ಹೋಗುವ ಜವಾಬ್ದಾರಿಯನ್ನು ಅವರ ಮನಸ್ಸಿನಲ್ಲಿ ಚಿಗುರಿಸಲಿ. ಮುಂಬರುವ ಹೊಸ ಸಮಿತಿಯು ಶ್ರೀ ಪ್ರಕಾಶ್ ಉಡುಪರು ಮತ್ತು ಮನಮೋಹನ್ ಕಟ್ಪಾಡಿಯವರ ಸಾರಥ್ಯದಲ್ಲಿ, ಶಿವಳ್ಳಿ ಕುಟುಂಬದ ಕೀರ್ತಿ ಜಗದಗಲ ಪ್ರಕಾಶಿಸಲಿ ಎಂಬ ಆಶಯ.