ತಂಬಾಕು ಎಂಬುದು ನಿಕೋಟಿನ್ ಯುಕ್ತ ಎಲೆಯಾಗಿದ್ದು ಅತೀ ವ್ಯಸನಕಾರಿ ಪದಾರ್ಥ ವಾಗಿದೆ. ನಿಕೋಟಿಯಾನಾ Tobaccum ಎಂದು ವೈಜ್ಞಾನಿಕವಾಗಿ ಗುರುತಿಸಲ್ಪಟ್ಟಿರುವ ಈ ರಾಸಾಯನಿಕ ಪ್ರಪಂಚದಾದ್ಯಂತ ಅನಾರೋಗ್ಯ, ಕ್ಯಾನ್ಸರ್ ಹಾಗು ಸಾವಿಗೆ ಕಾರಣವಾಗಿರುವ ಅಂಶಗಳಲ್ಲಿ ಪ್ರಮುಖ ಪದಾರ್ಥವಾಗಿದೆ.
ತಂಬಾಕನ್ನು ಹೊಗೆಸಹಿತ ಮತ್ತು ಹೊಗೆರಹಿತ ಎಂಬ ಎರಡು ವಿಧಾನಗಳಲ್ಲಿ ಬಳಸಲಾಗುತ್ತದೆ. ಹೊಗೆ ಸಹಿತವಾಗಿ ಸಿಗರೇಟ್, ಬೀಡಿ, ಸಿಗಾರ್ , ಹುಕ್ಕಾಗಳಲ್ಲಿ ಬಳಕೆಯಾದರೆ ಹೊಗೆ ರಹಿತವಾಗಿ ಪಾನ್ ಬೀಡಾ, ನಷ್ಯ, ಗುಟ್ಕಾ, ಡಿಪ್ ಪುಡಿ ( ತುಟಿ ಹಾಗು ದವಡೆಯ ಮಧ್ಯೆ ಇರಿಸುವ ಪುಡಿ) ಮುಂತಾದ ರೂಪಗಳಲ್ಲಿ ಬಳಸಲಾಗುತ್ತದೆ. ಇ - ಸಿಗರೇಟ್/ಸಿಗಾರ್ ದ್ರವರೂಪದ ನಿಕೋಟಿನ್ ನ್ನು ಉಷ್ಣತೆಯಿಂದ ಆವಿಯಾಗಿಸಿ ಸೇವಿಸುವ ತಂಬಾಕಾಗಿದೆ.
ದ್ರವ ರೂಪದಲ್ಲಿ, ಕ್ಯಾಂಡಿ, ಚಾಕೊಲೇಟ್ ಗಳಾಗಿಯೂ ತಂಬಾಕು ಲಭ್ಯವಿದೆ. ಯಾವುದೇ ರೂಪದಲ್ಲಿ ತಂಬಾಕನ್ನು ಸೇವಿಸಿದರೂ ಅದು ದೇಹಕ್ಕೆ ಹಾನಿಕಾರಕ. ತಲೆಯ ಕೂದಲಿನಿಂದ ಕಾಲ ಬೆರಳ ತುದಿಯವರೆಗೂ ಶರೀರದ ಎಲ್ಲಾ ಅಂಗಾಂಗಗಳನ್ನು ಸುಡುವ ಶಕ್ತಿಯಿರುವ ತಂಬಾಕು ಹಲವು ಕ್ಯಾನ್ಸರ್ ಗಳಿಗೆ ಕಾರಣವೂ ಹೌದು .
ಹೊಗೆ ಸಹಿತ ಧೂಮಪಾನ, ಸಕ್ರಿಯ/ಪ್ರತ್ಯಕ್ಷ ಅಥವಾ ನಿಷ್ಕ್ರಿಯ/ಪರೋಕ್ಷ ವಿಧಾನದ್ದಾಗಿರಬ ಹುದು. ಇತರರು ಧೂಮಪಾನ ಮಾಡಿ ಹೊರಹಾಕಿದ ಹೊಗೆ ಮಿಶ್ರಿತ ಗಾಳಿಯ ಸೇವನೆ ನಿಷ್ಕ್ರಿಯ/ಪರೋಕ್ಷ ಧೂಮಪಾನ ವೆಂದು ಕರೆಯಲ್ಪಡುತ್ತದೆ. ಎಂದರೆ ಓರ್ವ ವ್ಯಕ್ತಿಯ ಧೂಮಪಾನ ಆತನ ಜೊತೆಗಿರುವವರನ್ನು , ಅಕ್ಕಪಕ್ಕದವರನ್ನೂ ಕಾಡುತ್ತದೆ. ಸ್ವತಃ ಹೊಗೆ ಬಿಡದಿದ್ದರೂ ಇತರರ ಧೂಮಪಾನ ನಿಮ್ಮನ್ನು ಸುಡಬಹುದು. ಇದನ್ನು ಸೆಕೆಂಡ್ ಹ್ಯಾಂಡ್ ಧೂಮಪಾನವೆಂದೂ ಕರೆಯಲಾಗುತ್ತದೆ. ತಂಬಾಕನ್ನು ಹೊಂದಿರುವ ಸಿಗರೇಟ್ ಬೀಡಿ ಪ್ಯಾಕೆ ಟುಗಳ ಮೇಲೆ ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂಬ ಎಚ್ಚರಿಕೆ ನಮೂದಿಸಲ್ಪಟ್ಟಿ ದ್ದರೂ ಹಲವಾರು ಜನ ಮೋಜು ಮಸ್ತಿಗಾಗಿ , ದುಃಖ ನಿವಾರಣೆಗಾಗಿ ಈ ತಂಬಾಕಿನ ದುಶ್ಚಟದ ದಾಸ ರಾಗಿ ಆರೋಗ್ಯವನ್ನು ಕಳೆದುಕೊಳ್ಳುತ್ತಾರೆ.
ತಂಬಾಕಿನ ದುಷ್ಪರಿಣಾಮಗಳ ಕುರಿತು ಅರಿವು ಹಾಗೂ ಆರೋಗ್ಯ ಕಾಳಜಿ ಮೂಡಿಸುವ ಸಲುವಾಗಿ ವಿಶ್ವ ಆರೋಗ್ಯ ಸಂಸ್ಥೆ ಪ್ರತೀ ವರ್ಷವೂ ಮೇ ತಿಂಗಳ 31ನ್ನು ವಿಶ್ವ ತಂಬಾಕು ರಹಿತ ದಿನವನ್ನಾಗಿ ಆಚರಿಸುತ್ತದೆ. 2025 ರ ಧ್ಯೇಯವಾಕ್ಯ Brightproducts dark intentions #Unmask the Appeal ಎಂಬುದಾಗಿದೆ. ತಂಬಾಕಿನ ಉತ್ಪನ್ನಗಳನ್ನು ತಯಾರಿಸುವ ಕಂಪೆನಿಗಳು ಯಾವ ವಿಧದಲ್ಲಿ ತಮ್ಮ ಬಳಕೆದಾರರನ್ನು ಸೆಳೆಯುತ್ತಾರೆ, ಯುವ ಪೀಳಿಗೆಯನ್ನು ತಂಬಾಕಿನತ್ತ ಆಕರ್ಷಿಸಲು ಯಾವ ತಂತ್ರಗಳನ್ನು ಬಳಸುತ್ತಾರೆ ಎಂಬುದನ್ನು ಜನತೆಗೆ ಮನವರಿಕೆ ಮಾಡಿಸುವ ಉದ್ದೇಶ ಈ ಬಾರಿಯ ಧೇಯವಾಕ್ಯದ್ದಾಗಿದೆ.
ಈಗಾಗಲೇ ತಿಳಿಸಿದಂತೆ ತಂಬಾಕು ದೇಹದ ಪ್ರತೀ ಜೀವಕೋಶದ ಮೇಲೂ ತನ್ನ ದುಷ್ಪರಿಣಾಮವನ್ನು ಬೀರುತ್ತದೆ. ಮಹಿಳೆ, ಗರ್ಭಿಣಿಯರೂ ಇದರಿಂದ ಹೊರತಲ್ಲ. ಇತ್ತೀಚಿನ ದಿನಗಳಲ್ಲಿ ತಂಬಾಕಿನ ಉತ್ಪನ್ನಗಳನ್ನು ಬಳಸುವುದು ಸಾಮಾನ್ಯವಾಗಿದೆ. ಜೊತೆಗೆ ಮನೆಯಲ್ಲಿನ ಇತರರ ಧೂಮಪಾನದಿಂದ ವನಿತೆಯರು ಪರೋಕ್ಷ ಧೂಮಪಾನಕ್ಕೂ ಒಳಗಾಗುತ್ತಾರೆ. ತಂಬಾಕು ಮಹಿಳೆಯರ ಸಾಮಾ ನ್ಯ ಆರೋಗ್ಯವನ್ನು ಹದಗೆಡಿಸುವುದರ ಜೊತೆಗೆ ಸಂತಾನಹೀನತೆ, ಕ್ಯಾನ್ಸರ್ ಗೂ ಕಾರಣವಾಗ ಬಲ್ಲದು.
ಹದಿಹರೆಯದಲ್ಲಿನ ಧೂಮಪಾನ ಶ್ವಾಸಕೋಶ ವನ್ನು ಘಾಸಿಗೊಳಿಸುವುದರ ಜೊತೆಗೆ ಇತರ ಮಾದಕ ವ್ಯಸನಗಳ ಚಾಳಿಯನ್ನು ಅಂಟಿಸ ಬಹುದು. (Gateway Effect). ಮೆದುಳಿನ ಬೆಳವಣಿಗೆಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಶಾರೀರಿಕ ಸಾಮರ್ಥ್ಯ ಮತ್ತು ಸಹಿಷ್ಣುತೆಯನ್ನು ಕುಂದಿಸಬಹುದು. ಮಾನಸಿಕ ಆರೋಗ್ಯ ಹದಗೆಟ್ಟು ಗೀಳು, ಆತಂಕ, ಗಾಬರಿ, ಖಿನ್ನತೆ ಮನೆ ಮಾಡಬಹುದು. ಯುವ ಜನತೆ ಅಪ್ರಾಪ್ತ ವಯಸ್ಸಿನಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಂಡು ಲೈಂಗಿಕ ಸೋಂಕು, ಏಡ್ಸನಂತಹ ಲೈಂಗಿಕ ರೋಗಗಳು, ಹದಿಹರೆಯದಲ್ಲಿ ಗರ್ಭ ಧಾರಣೆ, ಲೈಂಗಿಕ ದೌರ್ಜನ್ಯ ಮುಂತಾದ ಸಮಸ್ಯೆ ಗಳು ಉದ್ಭವಿಸಬಹುದು.
ಧೂಮಪಾನ ಮಹಿಳೆಯರ ಜನನಾಂಗದ ಕಾರ್ಯಶೈಲಿಯ ಮೇಲೆ ದುಷ್ಪರಿಣಾಮ ಬೀರಿ ಸಂತಾನಹೀನತೆ, ಅನಿಯಮಿತ ಮುಟ್ಟು, ಋತುಸ್ರಾವದಲ್ಲಿ ವ್ಯತ್ಯಯ, ಮುಟ್ಟಿನ ಹೊಟ್ಟೆ ನೋವಿಗೂ ಕಾರಣವಾಗಬಹುದು. ಧೂಮಪಾನಿ ಗಳಲ್ಲಿ ಋತು ಬಂಧ (menopause) ಬೇಗನೆ ಕಾಣಿಸಿಕೊಳ್ಳುತ್ತದೆ. ಋತು ಬಂಧದ ಚಿಹ್ನೆಗಳಾದ ಮೈ ಬಿಸಿಯಾಗುವಿಕೆ (hot flushes), ಚಳಿ, ಬೆವರುವಿಕೆ ಧೂಮಪಾನ ಮಾಡುವ ಮಹಿಳೆ ಯರಲ್ಲಿ ತೀವ್ರವಾಗಿರುತ್ತದೆ.
ಸಂತಾನೋತ್ಪತ್ತಿಯ ಸಮಯದಲ್ಲಿ ಧೂಮಪಾನ ದಿಂದ ಗರ್ಭನಾಳದಲ್ಲಿ ಗರ್ಭಧಾರಣೆ, ಗರ್ಭಪಾತ, ಅವಧಿ ಪೂರ್ವ ಹೆರಿಗೆ ಮತ್ತು ಶಿಶು ಗರ್ಭದಲ್ಲಿಯೇ ಮರಣ ಹೊಂದುವ ತೊಡಕುಗಳು ಎದುರಾಗ ಬಹುದು. ಮಾಸು ಚೀಲ ಗರ್ಭಾಶಯದ ಕೆಳ ಭಾಗದಲ್ಲಿ ನೆಲೆ ನಿಲ್ಲುವ, ಹಾಗೆಯೇ ಹೆರಿಗೆಗೆ ಮುನ್ನವೇ ಗರ್ಭಕೋಶದಿಂದ ಕಳಚಿಕೊಳ್ಳುವ ಸಮಸ್ಯೆಗಳು ಹೆಚ್ಚಾಗಬಹುದು.
ಗಂಡಸರಲ್ಲಿಯೂ ಧೂಮಪಾನ ಜನನಾಂಗಗಳ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ನಿಮಿರು ದೌರ್ಬಲ್ಯ, ಶೀಘ್ರ ಸ್ಖಲನ, ವೀರ್ಯಾಣುಗಳ ಸಂಖ್ಯೆ, ಚಲನೆ, ರಚನೆಯಲ್ಲಿ ವ್ಯತ್ಯಾಸದಿಂದಾಗಿ ಗರ್ಭಧಾರಣೆಗೆ ಸಮಸ್ಯೆಯೊಡ್ಡಬಹುದು.
ಧೂಮಪಾನಿಗಳಾದ ದಂಪತಿಗಳಿಗೆ ಹುಟ್ಟುವ ಮಕ್ಕಳು ಕಡಿಮೆ ತೂಕದವರಾಗಿದ್ದು ಕುಂಠಿತ ಬೆಳವಣಿಗೆ ತೋರಿ ಬರಬಹುದು. ನಿಷ್ಕ್ರಿಯ ಧೂಮಪಾನದಿಂದ ಗರ್ಭಧಾರಣೆ ತಡವಾಗ ಬಹುದು. ಪರೋಕ್ಷ ಧೂಮಪಾನ ಗರ್ಭಿಣಿಯರ ಲ್ಲಿಯೂ ಸಮಸ್ಯೆಗಳಿಗೆ ಕಾರಣವಾಗಬಹುದು. ತಾಯಿಯ ಧೂಮಪಾನ ನವಜಾತ ಶಿಶುಗಳ ಆಕಸ್ಮಿಕ ಮರಣಕ್ಕೆ (SIDS) ಕಾರಣವಾಗಬಹುದು. ಸೀಳ್ದುಟಿಯಂತಹ ಜನ್ಮಜಾತ ನ್ಯೂನತೆಗಳು ಕಂಡು ಬರಬಹುದು. ಮಕ್ಕಳ ಬುದ್ಧಿಮತ್ತೆ ಹಾಗು ಗ್ರಹಣ ಶಕ್ತಿ ಕಡಿಮೆಯಾಗಿ ಕಲಿಕೆ ಮತ್ತು ವರ್ತನೆಗಳಲ್ಲಿ ಸಮಸ್ಯೆಗಳನ್ನು ತಂದೊಡ್ಡಬಹುದು.
ತಂಬಾಕನ್ನು ಯಾವುದೇ ರೂಪದಲ್ಲಿ ಸೇವಿಸಿದರೂ ಅದು ಆರೋಗ್ಯಕ್ಕೆ ಹಾನಿಕರ. ಈ ವ್ಯಸನವನ್ನು ತೊರೆಯುವುದರಿಂದ ದೈಹಿಕ, ಮಾನಸಿಕ ಹಾಗೂ ಸಂತಾನೋತ್ಪತ್ತಿಯ (reproductive health) ಆರೋಗ್ಯವನ್ನು ಕಾಯ್ದುಕೊಳ್ಳಬಹುದು. ಬೀಡಿ ಸಿಗರೇಟಿನ ಒಂದು ತುದಿಗೆ ಹಚ್ಚಿದ ಬೆಂಕಿ ಇಡೀ ಶರೀರವನ್ನೇ ಸುಟ್ಟು ಧೂಮಪಾನಿಗಳ ಜೊತೆಗೆ ಅವರ ಪರಿವಾರವನ್ನೂ ದಹಿಸುತ್ತದೆ. ತಂಬಾಕಿನ ವ್ಯಸನವನ್ನು ತ್ಯಜಿಸಲು ಹಲವು ಔಷಧಿಗಳು, ಆಪ್ತ ಸಮಾಲೋಚನೆ ಇವೇ ಮುಂತಾದ ಹಲವು ಮಾರ್ಗೋಪಾಯಗಳಿವೆ. ಇಂದಿನ ಯುವ ಪೀಳಿಗೆ ತಂಬಾಕಿನ ಆಮಿಷ ಒಡ್ಡುವ ಜಾಹೀರಾತು ಗಳಿಗೆ ಬಲಿಯಾಗದೆ ಸುದೃಢ ಭವಿಷ್ಯವನ್ನು ರೂಪಿಸಿ ಕೊಳ್ಳಬೇಕು.
-ಲೇಖನ : ಡಾ ರಾಜಲಕ್ಷ್ಮಿ, ಹೆರಿಗೆ ಮತ್ತು ಸ್ತ್ರೀ ಆರೋಗ್ಯ ತಜ್ಞರು ಸದಸ್ಯರು, ಸಾಮಾಜಿಕ ಆರೋಗ್ಯ ಉಪಸಮಿತಿ ಭಾರತೀಯ ವೈದ್ಯಕೀಯ ಸಂಘ ಕರ್ನಾಟಕ ರಾಜ್ಯ ಶಾಖೆ, ಕಾರ್ಯದರ್ಶಿ, ಸಾಮಾಜಿಕ ಆರೋಗ್ಯ ಅರಿವು ಸಮಿತಿ, ಹೆರಿಗೆ ಮತ್ತು ಸ್ತ್ರೀ ಆರೋಗ್ಯ ತಜ್ಞರ ಸಂಘ ಕರ್ನಾಟಕ ರಾಜ್ಯ ಶಾಖೆ 🎶