ಉಡುಪಿ : ವಿಶ್ವದ ಯಾವುದೇ ದೇಶಕ್ಕೆ ಇಲ್ಲದ ಕ್ಷಾತ್ರ ಪರಂಪರೆ ನಮ್ಮ ದೇಶಕ್ಕಿದೆ, ಈ ಕ್ಷಾತ್ರ ಪರಂಪರೆಯನ್ನು ಹುಟ್ಟು ಹಾಕುವಲ್ಲಿ ಮಾತೆಯರು ನೀಡಿದ ಕೊಡುಗೆ ಬಹಳ ದೊಡ್ಡದಿದೆ. ಪೆಹಲ್ಗಾವ್ ನಲ್ಲಿ ಉಗ್ರರು ಮಾತೆಯರ ಸಿಂದೂರವನ್ನು ಅಳಿಸಿದ ಘಟನಯ ನಂತರ ದೇಶದಲ್ಲಿ ಇದೀಗ ಮತ್ತೇ ಕ್ಷಾತ್ರ ಶಕ್ತಿ ಎಚ್ಚೆತ್ತುಕೊಂಡಿದೆ ಮತ್ತು ಆಪರೇಶನ್ ಸಿಂದೂರ ಮೂಲಕ ಅದೀಗ ವಿಶ್ವವ್ಯಾಪಿಯಾಗಿದೆ ಎಂದು ಸಾಮಾಜಿಕ ಚಿಂತಕ ಡಾ. ವಾದಿರಾಜ್ ಗೋಪಾಡಿ ಹೇಳಿದರು.
ಅವರು ಶುಕ್ರವಾರ ಇಲ್ಲಿನ ಕಡಿಯಾಳಿಯ ಶ್ರೀ ಮಹಿಷಮರ್ಧಿನಿ ದೇವಾಲಯದಲ್ಲಿ ಮಾತೃಮಂಡಳಿ ಮತ್ತು ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂಗಳ ವತಿಯಿಂದ ಆಪರೇಶನ್ ಸಿಂಧೂರದ ವಿಜಯೋತ್ಸವ ಮತ್ತು ಭಾರತೀಯ ಸೈನಿಕರ ಕ್ಷೇಮಕ್ಕಾಗಿ ದೇವಿಗೆ ಹೂವಿನ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪೆಹಲ್ಗಾವ್ ನಲ್ಲಿ ಪ್ರವಾಸಿಗರ ಧರ್ಮ ಕೇಳಿ, ಕೇವಲ ಪುರುಷರನ್ನು ಹತ್ಯೆ ಮಾಡಿ, ಮಾತೆಯರ ಸಿಂದೂರವನ್ನು ಅಳಿಸಿದ್ದು, ಅದು ಕೇವಲ ರಾಜತಾಂತ್ರಿಕ ಭಯೋತ್ಪಾದನೆಯಲ್ಲ, ಅದರ ಹಿಂದೆ ಅತ್ಯಂತ ಯೋಜಿತ, ಭಾರತೀಯ ಸಂಸ್ಕೃತಿಯನ್ನೇ ನಾಶ ಮಾಡುವ ಹುನ್ನಾರ ಇದೆ, ಈ ಮೂಲಕ ಭಾರತೀಯ ಸಂಸ್ಕೃತಿಗೆ ಮತ್ತು ಭಾರತದ ಶಕ್ತಿಗೆ ಸವಾಲು ಹಾಕಲಾಯಿತು ಎಂದರು.
ಭಾರತದ ಸೈನ್ಯ ಪಾಕಿಸ್ತಾನವನ್ನು ಕೆಲವೇ ದಿನಗಳಲ್ಲಿ ನಾಶ ಮಾಡಿಬಿಡಬಹುದಿತ್ತು, ಆದರೇ ಯುದ್ಧ ಕೇವಲ ಎರಡು ದೇಶಗಳ ಮೇಲೆ ಮಾತ್ರವಲ್ಲ ಇಡೀ ವಿಶ್ವದ ಮೇಲೆ ಧೀರ್ಘ ಕಾಲದ ದುಷ್ಪರಿಣಾಮವನ್ನು ಬೀರುತ್ತದೆ. ಭಾರತೀಯರು ದೇಶ ವಿದೇಶಗಳಲ್ಲಿದ್ದಾರೆ. ಅವರ ಮೇಲೆಯೂ ಪರಿಣಾಮಗಳಾಗುತ್ತವೆ. ಆದ್ದರಿಂದ ಭಾರತ ಯುದ್ಧಕ್ಕೆ ಪರ್ಯಾಯವಾದ ರಾಜತಾಂತ್ರಿಕ ರೀತಿಯಲ್ಲಿ ಪಾಕಿಸ್ತಾನಕ್ಕೆ ಉತ್ತರ ನೀಡಿದೆ. ಇದನ್ನು ಇಡೀ ವಿಶ್ವವೇ ಮೆಚ್ಚಿಕೊಂಡಿದೆ. ಈಗ ಆಗಿರುವುದು ಕೇವಲ ಯುದ್ಧ ವಿರಾಮವೇ ಹೊರತು ಭಯೋತ್ಪಾದನೆಯ ವಿರುದ್ಧ ಯುದ್ಧವನ್ನು ಭಾರತ ನಿಲ್ಲಿಸಿಲ್ಲ ಎಂದವರು ವಿಶ್ಲೇಷಿಸಿದರು.
ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಜಿಲ್ಲಾಧ್ಯಕ್ಷ ರಾಧಕೃಷ್ಣ ಮೆಂಡನ್, ಕಾರ್ಯದರ್ಶಿ ರಂಜಿತ್ ಶೆಟ್ಟಿ, ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಶ್ಯಾಮಲಾ ಕುಂದರ್, ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಸಂಧ್ಯಾ ರಮೇಶ್, ಕಡಿಯಾಳಿ ಮಾತ್ರಮಂಡಳಿ ಅಧ್ಯಕ್ಷೆ ಪದ್ಮಾವತಿ ರತ್ನಾಕರ್, ಸಲಹೆಗಾರರಾದ ಸುಪ್ರಭಾ ಅಚಾರ್ಯ ವೇದಿಕೆಯಲ್ಲಿದ್ದರು. ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂನ ಮಹಿಳಾ ಘಟಕದ ಅಧ್ಯಕ್ಷೆ ತಾರಾ ಉಮೇಶ್ ಆಚಾರ್ಯ ಸ್ವಾಗತಿಸಿ, ಕಾರ್ಯಕ್ರಮ ಸಂಯೋಜಿಸಿದರು.
ಪ್ರಮುಖರಾದ ಶ್ರೀ ಹರಿಯಪ್ಪ ಕೋಟ್ಯಾನ್,ಸರೋಜ ಶೆಣೈ, ಉಷಾ ಸುವರ್ಣ, ವೀಣಾ ಎಸ್.ಶೆಟ್ಟಿ, ರಮಿತಾ ಶೈಲೇಂದ್ರ, ತಾರಾ ಸತೀಶ್, ದಿವಾಕರ್ ಶೆಟ್ಟಿ ಮಲ್ಲಾರ್, ಯಶೋಧಾ ಕೇಶವ್ ಮುಂತಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಮಾತೆಯರೆಲ್ಲರಿಗೆ ಸಿಂದೂರ ಕರಡಿಗೆಗಳನ್ನು ವಿತರಿಸಿ ಗೌರವಿಸಲಾಯಿತು