Header Ads Widget

​ಸಮಾಜಕ್ಕೆ ನೀಡುವ ಕೊಡುಗೆ ಶ್ರೇಷ್ಠವಾದದ್ದು - ಅದಮಾರು ಶ್ರೀ...

ನಾವು ದುಡಿದುದರಲ್ಲಿ ಸ್ವಲ್ಪ ಅಂಶವನ್ನಾದರೂ ಸಮಾಜದ ಒಳಿತಿಗೆ ನೀಡಬೇಕು. ಸಮಾಜವನ್ನು ನಮ್ಮ ಮನೆ ಮಕ್ಕಳಂತೆ ಪೋಷಿಸಬೇಕು. ಸಮಾಜದ ಹಿತಕ್ಕಾಗಿ ದುಡಿಯುವವರನ್ನು, ಸಾಧನೆ ಮಾಡಿದವರನ್ನು, ಪ್ರತಿಭೆಗಳನ್ನು ಗುರುತಿಸಿ ಗೌರವಿಸಿ ಪ್ರೋತ್ಸಾಹಿಸಬೇಕು. ಇತರರ ನಗುವಿನಲ್ಲಿ ನಮ್ಮ ನಗುವನ್ನು ಕಾಣಬೇಕು. ಈ ನಿಟ್ಟಿನಲ್ಲಿ ಉಪಾಧ್ಯಾಯ ಮೂಡುಬೆಳ್ಳೆ ಕಲಾ ಪ್ರತಿಷ್ಠಾನ ಸಾಕಷ್ಟು ಸಮಾಜಮುಖಿ ಕೆಲಸಗಳನ್ನು ಮಾಡಿದೆ. ಎಲ್ಲರ ಪ್ರಶಂಸೆ ಗಳಿಸಿದೆ. 


ಈ ದಿನ ಉಪಾಧ್ಯಾಯ ಮೂಡುಬೆಳ್ಳೆಯವರ 60 ನೇ ಶಾಂತಿ ಪ್ರಯುಕ್ತ 60  ಆದರ್ಶ ದಂಪತಿಗಳನ್ನು ಗುರುತಿಸಿ ಗೌರವಿಸಿದ್ದು ಶ್ಲಾಘನೀಯ ಕೆಲಸ  ಎಂದು ಉಡುಪಿ ಅದಮಾರು ಮಠದ ಹಿರಿಯ ಯತಿಗಳಾದ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮಿಜಿಯವರು ನುಡಿದರು. 


ಉಪಾಧ್ಯಾಯ ಮೂಡುಬೆಳ್ಳೆ ಕಲಾ ಪ್ರತಿಷ್ಠಾನದ ದಶಮಾನೋತ್ಸವ ಸಮಾರಂಭವನ್ನು ಉಡುಪಿ ರಥಬೀದಿ ಶ್ರೀ ರಾಘವೇಂದ್ರ ಮಠದ ಮಂತ್ರಾಲಯ ಸಭಾಭವನದಲ್ಲಿ ಉದ್ಘಾಟಿಸಿ, ಆದರ್ಶ ದಂಪತಿ ಪುರಸ್ಕಾರವನ್ನು ನೀಡಿ ಆಶೀರ್ವಚನ ಗೈದರು. 


ಈ ಸಂದರ್ಭದಲ್ಲಿ ಉಪಾಧ್ಯಾಯ ಮೂಡುಬೆಳ್ಳೆಯವರ ಅದ್ಭುತ ರಂಗೋಲಿ ಸಾಧನೆಗಳನ್ನು ಬಿಂಬಿಸುವ "ಮಂಡಲ ದರ್ಶನ" ಪುಸ್ತಕವನ್ನು ಪರ್ಯಾಯ ಪುತ್ತಿಗೆ ಮಠದ ದಿವಾನರಾದ ಶ್ರೀ ಎಂ ನಾಗರಾಜ ಆಚಾರ್ಯ ಅವರು ಬಿಡುಗಡೆಗೊಳಿಸಿ.. ಧಾರ್ಮಿಕ ರಂಗೋಲಿ ಮಂಡಲವನ್ನು ಕುರಿತಾದ ಈ ಪುಸ್ತಕ ಬಹಳ ಅಪರೂಪವಾದದ್ದು ಹಾಗೂ ರಂಗೋಲಿ ಮಂಡಲ ಕಲಿಯುವವರಿಗೆ ಮಾರ್ಗದರ್ಶನ ನೀಡುವಂತದ್ದು ಮತ್ತು ಪೌರೋಹಿತ್ಯ ವರ್ಗಕ್ಕೆ ಬೇಕಾದಂತಹ ಪುಸ್ತಕ. ಇದರಿಂದ ಧಾರ್ಮಿಕ ಕಾರ್ಯಕ್ರಮಗಳು ಇನ್ನಷ್ಟು ಸೊಬಗುಗೊಳ್ಳಲಿ ಎಂದು ನುಡಿದರು.


 ಪುಸ್ತಕದ ಸಂಪಾದಕರಾದ ಕಮ್ಮರಡಿಯ ರಾಜ ಪುರೋಹಿತ ವಿದ್ವಾನ್ ಶ್ರೀಕಂಠ ಭಟ್ಟ ಅವರು ಪುಸ್ತಕದ ವಿಷಯ ಮಂಡನೆ ಮತ್ತು ಹೆಗ್ಗಳಿಕೆಯ ಬಗ್ಗೆ ಮಾತನಾಡಿದರು. ಈ ಪುಸ್ತಕದ ಪ್ರಕಾಶಕರಾದ ವಿದ್ವಾನ್ ಶ್ರೀವತ್ಸಭಟ್ಟ ಅವರು ಶುಭಶಂಸನೆಗೈದರು.


ಅಭಯ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಶ್ರೀ ಸಿ.ವಿ. ತಿರುಮಲ ರಾವ್  (ನಿವೃತ್ತ ಸಹ ನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ ಬೆಂಗಳೂರು) ಇವರು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕಲಾವಿದ ಡಾ. ಉಪಾಧ್ಯಾಯ ಮೂಡುಬೆಳ್ಳೆಯವರ ಕಲಾಸಾಧನೆ, ಕಾವಿ ಕಲೆಯಲ್ಲಿ ಅವರ ನೈಪುಣ್ಯತೆ, ಕಲಾ ಸಾಹಿತ್ಯದಲ್ಲಿ ಅವರ ಹೆಗ್ಗುರುತುಗಳನ್ನು ಶ್ಲಾಘಿಸಿದರು. 


ಈ ಸಂದರ್ಭದಲ್ಲಿ 60 ಜೋಡಿಗಳಿಗೆ ಆದರ್ಶ ದಂಪತಿ ಪುರಸ್ಕಾರವನ್ನು ಹಾಗೂ 50 ವರ್ಷಕ್ಕಿಂತಲೂ ಹೆಚ್ಚಿನ ದಾಂಪತ್ಯ ಜೀವನವನ್ನು ಕಳೆದಿರುವ 15 ಜೋಡಿಗಳಿಗೆ ಸುವರ್ಣ ದಂಪತಿ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು. ಯಕ್ಷಗಾನ ಕ್ಷೇತ್ರದ ಮೇರು ವ್ಯಕ್ತಿ ಶ್ರೀ ಎಂ.ಎಲ್. ಸಾಮಗ, ಖ್ಯಾತ ಜಾನಪದ ವಿದ್ವಾಂಸ ಶ್ರೀ ಕೆ. ಎಲ್. ಕುಂಡಂತಾಯ, ನಿವೃತ್ತ ಬ್ಯಾಂಕರ್ ಬೈಕಾಡಿ ಶ್ರೀನಿವಾಸರಾವ್  ಮುಂತಾದ ಹಲವು ಜೋಡಿಗಳನ್ನು ಸನ್ಮಾನಿಸ ಲಾಯಿತು. 


ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಉಪಾಧ್ಯಾಯ ಮೂಡುಬೆಳ್ಳೆ ಕಲಾ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಶ್ರೀ ಮಾಧವ ಉಪಾಧ್ಯಾಯ, ಶ್ರೀನಿವಾಸ ಉಪಾಧ್ಯಾಯ, ಕಾರ್ಯದರ್ಶಿ ಪ್ರದ್ಯುಮ್ನ ಉಪಾಧ್ಯಾಯ, ಕೋಶಾಧಿಕಾರಿ  ಡಾ. ಪ್ರಮೋದನ ಉಪಾಧ್ಯಾಯ ಹಾಗೂ ರಮಾಕಾಂತ, ವಾಸುದೇವ, ಗಣೇಶ ಮತ್ತು ಶ್ರೀಮತಿ ಪ್ರಸನ್ನ ಲಕ್ಷ್ಮಿ ರಾಧಾಕೃಷ್ಣ ಉಪಾಧ್ಯಾಯ ದಂಪತಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. 


 ಪ್ರಿಯಾ ಉಪಾಧ್ಯಾಯ ಪ್ರಾರ್ಥನೆಗೈದರು. ಪ್ರದ್ಯುಮ್ನ ಉಪಾಧ್ಯಾಯ ಪ್ರಸ್ತಾವನೆಗೈದರು. ಉಪಾಧ್ಯಾಯ ಮೂಡುಬೆಳ್ಳೆ ಅವರು   ಸ್ವಾಗತಿಸಿದರು.  ಪ್ರಮೋದನ ಉಪಾಧ್ಯಾಯ  ಧನ್ಯ ವಾದವಿತ್ತರು. ಪೂರ್ಣಿಮಾ ಜನಾರ್ಧನ್ ನಿರೂಪಿಸಿದರು.