Header Ads Widget

ಸಾವಿನ ಸವಾರಿ : ಸಾವಿರ ಕನಸು ಹೊತ್ತು ಸುಟ್ಟು ಕರಕಲಾದರು.

ಒಬ್ಬೊಬ್ಬರದ್ದು ಒಂದೊಂದು ಮನಕಲಕುವ ಕಥೆ


ಒಂದು ವಿಮಾನ ಪ್ರಯಾಣ ನೂರಾರು ಕುಟುಂಬಗಳ ಪಾಲಿಗೆ ಎಂದೆಂದೂ ಮರೆಯಲಾಗದ ದುಃಸ್ವಪ್ನವಾಗಿ ಬದಲಾಗಿದೆ.


ಅದೆಷ್ಟೋ ಮಂದಿ ಕನಸನ್ನು ಹೊತ್ತು ಬದುಕಿನ ಬಗ್ಗೆ ನಾನಾ ಲೆಕ್ಕಾಚಾರದೊಂದಿಗೆ ವಿಮಾನ ಹತ್ತಿದವರೆಲ್ಲ ಸುಟ್ಟು ಕರಕಲಾಗಿದ್ದಾರೆ.‌ ಅಯ್ಯೋ ವಿಧಿಯೇ.. ಒಬ್ಬರಿಗೆ ಅಪ್ಪ ಇಲ್ಲವಾದರೆ, ಇನ್ನೊಬ್ಬರಿಗೆ ಅಮ್ಮ ಇಲ್ಲ, ಇನ್ನೊಬ್ಬರಿಗೆ ಮಗಳಿಲ್ಲ, ಮತ್ತೊಬ್ಬರಿಗೆ ಅಣ್ಣ ತಂಗಿ, ಅಕ್ಕ ತಮ್ಮ ಇಲ್ಲ. ಮತ್ತೊಬ್ಬರಿಗೆ ಮೊಮ್ಮಗ ಇಲ್ಲ, ಇನ್ಯಾರಿಗೂ ಅಜ್ಜ ಅಜ್ಜಿ ಇಲ್ಲ. ಮತ್ಯಾರದೋ ಇಡೀ ಕುಟುಂಬವೇ ಇಲ್ಲ. ಇನ್ಯಾರೋ ತಾಯಿ ಕಾಣಲು ಹೋದ ಮಗಳಿಲ್ಲ. ಮಗಳು ಕಾಣಲು ಹೋದ ತಂದೆಯಿಲ್ಲ. ಹೆಂಡತಿ ಕಾಣಲು ಹೋದ ಗಂಡನಿಲ್ಲ. ಗಂಡ ಕಾಣಲು ಹೋದ ಹೆಂಡತಿಯಿಲ್ಲ. ಮತ್ಯಾರೋ ಹೆಂಡತಿ ಚಿತಾಭಸ್ಮ ವಿಸರ್ಜಿಸಲು ಬಂದು ಆತನೇ ಇಲ್ಲ . ಹೀಗೆ ನೂರಾರು ಕರುಣಾಜನಕ, ಮನಕಲಕುವ ಕಥೆಗಳು.

ಎರಡು ವರ್ಷಗಳ ಹಿಂದೆಯಷ್ಟೇ ಆತ ಏರ್ ಇಂಡಿಯಾ ಕೆಲಸಕ್ಕೆ ಸೇರಿದ್ದ. ಈ ಕ್ಷೇತ್ರದಲ್ಲಿ ಏನಾದರೂ ಸಾಧಿಸಬೇಕೆಂಬ ಹಠವಿತ್ತು. ಇದೀಗ ಆತನ ಕನಸೆಲ್ಲ ನುಚ್ಚು ನೂರಾಯಿತು. 20 ವರ್ಷದ ಇರ್ಫಾನ್ ಕುಟುಂಬ ಪುಣೆಯ ಪ್ರಿಂಪ್ರಿ -ಚಿಂಚ್ ವಾಡ್ ನಲ್ಲಿ ವಾಸಿಸುತ್ತಿದೆ. ಇರ್ಫಾನ್ ಕನಸೆಲ್ಲ ಛಿದ್ರಛಿದ್ರವಾಗಿದೆ.

ವಿಮಾನ ಹೊರಡುವ ಕೆಲ ಮುಂಚೆಯಷ್ಟೇ ನಮ್ಮೊಂದಿಗೆ ಮಾತನಾಡಿದ್ದಳು. ವಿಮಾನ ಹೊರಡುತ್ತಿದೆ ಎಂಬ ಸಂದೇಶವನ್ನು ಕಳುಹಿಸಿದ್ದಳು. ಸಿಬ್ಬಂದಿ 20 ವರ್ಷದ ನಾಗಂಥೋ ಯ್  ಶರ್ಮಾ ಕುಟುಂಬಿಕರ ಅಳಲು ಇದು.


36 ವರ್ಷದ ಅರ್ಜುನ್ ಮನುಭಾಯಿ ಪಟೋಲಿಯಾ ಕತೆ ಎಂಥವರ ಮನಸ್ಸನ್ನಾದರೂ ಕರಗಿಸಿ ಕಣ್ಣಲ್ಲಿ ನೀರು ಬರಿಸುತ್ತದೆ. ಅರ್ಜುನ್ ಮನುಭಾಯಿ ಅವರ ಪತ್ನಿ ಭಾರತಿ ಬೆನ್ ಒಂದು ವಾರದ ಹಿಂದೆಯಷ್ಟೇ ಲಂಡನ್ ನಲ್ಲಿ ಮೃತಪಟ್ಟಿದ್ದರು. ಮರಣಶಯ್ಯೆಯಲ್ಲಿದ್ದ ಆಕೆ ಪತಿಗೆ ಹೇಳಿದ್ದ ಮಾತು ‘ಸಾವಿನ ನಂತರ ತನ್ನ ಚಿತಾಭಸ್ಮವನ್ನು ತಾಯ್ನಾಡು ಭಾರತ ದಲ್ಲೇ ವಿಸರ್ಜಿಸಬೇಕು ‘ ಎಂಬುದು. ಪತ್ನಿಯ ಕೊನೆಯ ಆಸೆಯನ್ನು ಈಡೇರಿಸಲು ಗುಜ ರಾತಿನ ವಾಡಿಯಾಕ್ಕೆ ಬಂದಿದ್ದ. ಎಲ್ಲಾ ವಿಧಿವಿಧಾನ ಪೂರೈಸಿ ವಿಮಾನ ಹತ್ತಿದ ಅರ್ಜುನ್ ದುರಂತದಲ್ಲಿ ಮಡಿದ. ತನ್ನ ನಾಲ್ಕು ವರ್ಷ, ಎಂಟು ವರ್ಷದ ಪುಟ್ಟ ಇಬ್ಬರು ಹೆಣ್ಣು ಮಕ್ಕಳನ್ನು ಲಂಡನ್ ನಲ್ಲಿ ಬಿಟ್ಟು ಬಂದಿದ್ದ.


ಲಾರೆನ್ಸ್ ಡೇನಿಯಲ್ ಲಂಡನ್ ನಲ್ಲಿ ಕೆಲಸ ಮಾಡಿಕೊಂಡಿದ್ದವರು. ತನ್ನ ತಂದೆಯ ಅಂತ್ಯಸಂಸ್ಕಾರಕ್ಕೆ ಗುಜರಾತಿನ ಮಣಿನಗರಕ್ಕೆ ಬಂದಿದ್ದರು. ಬರುವಾಗ ತಂದೆಯನ್ನು ಕಳೆದುಕೊಂಡ ದು:ಖದಲ್ಲೇ ಬಂದಿದ್ದ. ಹೋಗುವಾಗಲೂ ಎದೆಯಲ್ಲಿ ನೋವಿಟ್ಟುಕೊಂಡೇ ಹೊರಟಿದ್ದ. ಇದೇ ವೇಳೆ ವಿಮಾನ ನಿಲ್ದಾಣದಲ್ಲಿ ತಾಯಿಯ ಜೊತೆ ಪೋಟೋ ತೆಗೆಸಿ ಕೊಂಡು ಮತ್ತೆ ಬರುತ್ತೇನೆಂದು ವಿಮಾನ ಹತ್ತಿದವ ಕೆಲವೇ ಕ್ಷಣದಲ್ಲಿ ದುರ್ಮರಣಕ್ಕೀಡಾ ಗಿದ್ದ. ಅಪ್ಪನ ಅಂತ್ಯಸಂಸ್ಕಾರಕ್ಕೆ ಬಂದು ತಾಯಿಗೆ ಸಾಂತ್ವನ ಹೇಳಿ ಹೊರಟಿದ್ದ ಮಗನೇ ದುರಂತ ಅಂತ್ಯ ಕಂಡಿದ್ದ.

ಇನ್ನೇನು ಬೆಳಗಾಗುವಷ್ಟರಲ್ಲಿ ಅಪ್ಪ -ಅಮ್ಮ ಬಂದಿಳಿಯುತ್ತಾರೆಂದು ವಿಮಾನದ ಟಿಕೆಟ್ ಬುಕ್ ಮಾಡಿಸಿದ್ದ ಹಿರಿಯ ಮಗ ಲಂಡನ್ ನಲ್ಲಿ ಕಾದು ಕುಳಿತಿದ್ದ. ಆದರೆ ವಿಧಿಯಾಟವೇ ಬೇರೆ ಇತ್ತು. ಮಹಾರಾಷ್ಟ್ರದ ಸೊಲ್ಲಾಪುರದ ಹಾತಿಡ್ ಗ್ರಾಮದ ಮಹಾದೇವ್ ಪವಾರ್, ಆಶಾ ಪವಾರ್ ದಂಪತಿ ದೂರದ ಲಂಡನ್ ನಲ್ಲಿರುವ ಹಿರಿಮಗನ ಜೊತೆ ಕೆಲ ಕಾಲ ಇದ್ದು ಬರಬೇಕೆಂದು ಹೊರಟಿದ್ದವರ ಕನಸನ್ನೇ ಏರ್ ಇಂಡಿಯಾ ದುರಂತ ಕಸಿದುಕೊಂಡಿತ್ತು.

ಹೀಗೆ ಏರ್ ಇಂಡಿಯಾ ದುರಂತದಲ್ಲಿ ಮಡಿದವರ ಒಬ್ಬೊಬ್ಬರ ಕಥೆ ಕರುಣಾಜನಕ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು