ಕ್ರಿಶ್ಚಿಯನ್ ಪ.ಪೂ. ಕಾಲೇಜು: 2025-26 ನೇ ಸಾಲಿನ ವಿದ್ಯಾರ್ಥಿ ಸಂಘ ಉದ್ಘಾಟನೆ

ದಿನಾಂಕ 14.7.25 ರಂದು ಉಡುಪಿಯ ಕ್ರಿಶ್ಚಿಯನ್ ಪದವಿ ಪೂರ್ವ ಕಾಲೇಜಿನಲ್ಲಿ 2025-26 ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಪಾಂಗಾಳ ಕರುಣಾಕರ ಶೆಟ್ಟಿ ಇವರ ವತಿಯಿಂದ ನಗದು ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ಕೊಡುಗೈ ದಾನಿ ಕರುಣಾಕರ್ ಶೆಟ್ಟಿ ಇವರು ಸುಮಾರು ಐದಾರು ವರ್ಷಗಳಿಂದ ವಿದ್ಯಾರ್ಥಿಗಳನ್ನು ಪ್ರೇರೇಪಿಸುವ ಸಲುವಾಗಿ ಹಮ್ಮಿಕೊಂಡಿದ್ದಾರೆ.

2024-25ನೇ ಸಾಲಿನ ದ್ವಿತೀಯ ಪಿಯುಸಿಯಲ್ಲಿ ಅತೀ ಹೆಚ್ಚಿನ ಅಂಕಗಳಿಸಿದ ಕ್ರಿಶ್ಚಿಯನ್ ಪಿಯು ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಗಳಾದ ಸತ್ಯವತಿ, ಸಂತೋಷಿ, ಭಾಗ್ಯ, ಕೃಷ್ಣ ಹಾಗೂ ರಾಜೇಶ್ವರಿ ಇವರಿಗೆ ಪಾಂಗಳ ಕರುಣಾಕರ್ ಶೆಟ್ಟಿ ಇವರು ನಗದು ಬಹುಮಾನವನ್ನು ವಿತರಿಸಿದರು. ಹಾಗೆಯೇ ಕಾಲೇಜಿನ ವತಿಯಿಂದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಅಂತೆಯೇ ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ್ದ ಕ್ರಿಶ್ಚಿಯನ್ ಪದವಿ ಪೂರ್ವ ಕಾಲೇಜಿನ ನೂತನ ಸಂಚಾಲಕರಾದ ಡಾ. ಸುಶೀಲ್ ಜತ್ತನ್ ಇವರನ್ನು ಕಾಲೇಜಿನ ಪರವಾಗಿ ಗೌರವಿಸಲಾಯಿತು.

ಈ ಸಂಧರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷರಾದ ರೆ. ಐವನ್ ಸೋನ್ಸ್, ರಕ್ಷಕ ಶಿಕ್ಷಕ ಸಂಘದ ಜಾನ್ ಸುದರ್ಶನ್, ಬಡಗುಬೆಟ್ಟು ಸೊಸೈಟಿಯ ಮುಖ್ಯ ವ್ಯವಸ್ಥಾಪಕರಾದ ರಾಜೇಶ್ ಶೇರಿಗಾರ್, ಉಪ ವ್ಯವಸ್ಥಾಪಕರಾದ ಪ್ರವೀಣ್ ಕುಮಾರ್, ಕಾಲೇಜಿನ ಹಿತೈಷಿ ಪ್ರಭಾ ಕರುಣಾಕರ್ ಶೆಟ್ಟಿ,ಹಳೆ ವಿದ್ಯಾರ್ಥಿ ಪಾಂಗಳ ನಾಗೇಂದ್ರ ನಾಯಕ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಹೇಶ್ ಹಾಗೂ ಕಾಲೇಜಿನ ವಿದ್ಯಾರ್ಥಿ ಮುಖಂಡರು ಹಾಗೂ ಬೋಧಕ ಬೋಧಕೇತರ ಸಿಬ್ಬಂಧಿಗಳು ಉಪಸ್ಥಿತರಿದ್ದರು.

 ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಪ್ರಾಂಶುಪಾಲರಾದ ಶ್ವೇತಾ ಶ್ರೀನಿವಾಸ್ ಸ್ವಾಗತ ಭಾಷಣ ಮಾಡಿದರು. ಇತಿಹಾಸದ ಉಪನ್ಯಾಸಕಿ ಪೂಜಾ ಮೇಡಂ ವಂದಿಸಿದರು. ಕನ್ನಡ ಉಪನ್ಯಾಸಕಿ ಅನಿತಾ ಸಿಕ್ವೇರಾ ಕಾರ್ಯಕ್ರಮ ನಿರೂಪಣೆ ಮಾಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು