ಉಡುಪಿ: ವಿಶ್ವ ಭಾರತಿ ಕರ್ನಾಟಕ ಪ್ರತಿಷ್ಠಾನ, ಬೆನಗಲ್ ಅವರ ಪ್ರಾಯೋಜಕತ್ವದಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ.), ಉಡುಪಿ ನೀಡುವ ಕವಿ ಕುರಾಡಿ ಸೀತಾರಾಮ ಅಡಿಗ ನೆನಪಿನ ಕಾವ್ಯ ಪ್ರಶಸ್ತಿ–2026ಕ್ಕೆ ಬೆಂಗಳೂರಿನ ಕವಿ ಡಾ. ಲಕ್ಷ್ಮಣ್ ವಿ. ಎ. ಅವರ ‘ಪರಿಮಳದ ಬಾಕಿ ಮೊತ್ತ’ ಕವನ ಸಂಕಲನ ಆಯ್ಕೆಯಾಗಿದೆ.
ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ.), ಉಡುಪಿ ಸಂಸ್ಥೆಯು 2025ರಲ್ಲಿ ಪ್ರಕಟಗೊಂಡ ಕವನ ಸಂಕಲನಗಳನ್ನು ಪ್ರಶಸ್ತಿಗಾಗಿ ಆಹ್ವಾನಿಸಿತ್ತು. ರಾಜ್ಯದ ವಿವಿಧ ಭಾಗಗಳಿಂದ ಒಟ್ಟು 71 ಕವನ ಸಂಕಲನಗಳು ಸ್ಪರ್ಧೆಗೆ ಬಂದಿದ್ದವು.
ಕನ್ನಡ ಸಾಹಿತ್ಯ ಲೋಕದ ಹಿರಿಯ ವಿಮರ್ಶಕ ಹಾಗೂ ಸಂಸ್ಕೃತಿ ಚಿಂತಕ ಪ್ರೊ. ಎಚ್. ದಂಡಪ್ಪ ಅವರು ತೀರ್ಪುಗಾರರಾಗಿ ಕಾರ್ಯನಿರ್ವಹಿಸಿ, ‘ಪರಿಮಳದ ಬಾಕಿ ಮೊತ್ತ’ ಕವನ ಸಂಕಲನವನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ.
ಪ್ರಶಸ್ತಿಯು ₹10,000 ನಗದು ಗೌರವಧನ, ಪ್ರಶಸ್ತಿ ಪತ್ರ ಹಾಗೂ ಫಲಕವನ್ನು ಒಳಗೊಂಡಿರುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭವು ಸೆಪ್ಟೆಂಬರ್ 2026ರಲ್ಲಿ ನಡೆಯಲಿದೆ ಎಂದು ಪ್ರಶಸ್ತಿ ಸಮಿತಿಯ ಸಂಚಾಲಕಿ ಶ್ರೀಮತಿ ಪೂರ್ಣಿಮಾ ಜನಾರ್ದನ ತಿಳಿಸಿದ್ದಾರೆ.
ಡಾ. ಲಕ್ಷ್ಮಣ್ ವಿ. ಎ. — ಪರಿಚಯ
ಡಾ. ಲಕ್ಷ್ಮಣ್ ವಿಠೋಬ ಅಟಪಟಕರ ಅವರು 1 ಜುಲೈ 1977ರಂದು ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದಲ್ಲಿ ಜನಿಸಿದರು.
ಆಯುರ್ವೇದ ವೈದ್ಯರಾಗಿ ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿರುವ ಅವರು ಕವಿ, ಕಥೆಗಾರ ಹಾಗೂ ಅಂಕಣಕಾರರಾಗಿ ಕನ್ನಡ ಸಾಹಿತ್ಯದಲ್ಲಿ ಗುರುತಿಸಿಕೊಂಡಿದ್ದಾರೆ. ವಿಜಯ ಕರ್ನಾಟಕ ಪತ್ರಿಕೆಯ ಜನಪ್ರಿಯ ‘ವೈದ್ಯ ವಿಸ್ಮಯ’ ಅಂಕಣದ ಲೇಖಕರಾಗಿದ್ದಾರೆ.
ಪ್ರಮುಖ ಕೃತಿಗಳು
‘ಎಲೆಕ್ಟ್ರಿಕ್ ಬೇಲಿ ಮತ್ತು ಪಾರಿವಾಳ’, ‘ಅಪ್ಪನ ಅಂಗಿ’, ‘ಕಾಯಿನ್ ಬೂತ್’, ‘ಪರಿಮಳದ ಬಾಕಿ ಮೊತ್ತ’, ‘ಪಿ.ಎಚ್.ಸಿ. ಕವಲುಗುಡ್ಡ’ ಸೇರಿದಂತೆ ಒಟ್ಟು 11 ಕೃತಿಗಳು ಪ್ರಕಟಗೊಂಡಿವೆ.
ಪ್ರಮುಖ ಪ್ರಶಸ್ತಿಗಳು
ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ — ‘ಕಾಯಿನ್ ಬೂತ್’
‘ಈ ಹೊತ್ತಿಗೆ’ ಕಾವ್ಯ ಪುರಸ್ಕಾರ — ‘ಪರಿಮಳದ ಬಾಕಿ ಮೊತ್ತ’
ಕವಿ ಕುರಾಡಿ ಸೀತಾರಾಮ ಅಡಿಗ ಕಾವ್ಯ ಪ್ರಶಸ್ತಿ–2026 — ‘ಪರಿಮಳದ ಬಾಕಿ ಮೊತ್ತ’
ಕಡೆಂಗೋಡ್ಲು ಕಾವ್ಯ ಪ್ರಶಸ್ತಿ–2026
ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆ — ಪ್ರಥಮ ಬಹುಮಾನ
ಅವರ ಎರಡು ಕಥೆಗಳು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಸೇರಿದಂತೆ ವಿಶ್ವವಿದ್ಯಾಲಯಗಳ ಪಠ್ಯಕ್ರಮದಲ್ಲಿ ಸೇರಿಸಲ್ಪಟ್ಟಿವೆ.
